ಬೆಂಗಳೂರು: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾರಗೌಡನಹಳ್ಳಿ ಸೌಲಭ್ಯದ ದೃಷ್ಟಿಯಿಂದ ಅತ್ಯಂತ ಹಿಂದುಳಿದ ಗ್ರಾಮವಾಗಿದೆ. ಇಲ್ಲಿಗೆ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲ. ಆದರೆ ಇಲ್ಲಿನ ಮಕ್ಕಳ ಕಲಿಕೆಯ ಉತ್ಸಾಹವನ್ನು ಸೌಲಭ್ಯದ ಕೊರತೆ ಯಾವುದರಲ್ಲಿಯೂ ಹಿಂದುಳಿಸಿಲ್ಲ.
ಇಲ್ಲಿನ ಸರ್ಕಾರಿ ಹೈಸ್ಕೂಲ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಶಾಲೆಯ 8ನೇ ತರಗತಿಯ 54 ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತೆ ವಿದ್ಯಾರ್ಥಿವೇತನ(ಎನ್ಎಂಎಂಎಸ್) ಆಯ್ಕೆಯಾಗಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನೀಡುತ್ತಿರುವ ಸ್ಕಾಲರ್ ಷಿಪ್ ಇದು. ಮಂಡ್ಯ ಜಿಲ್ಲೆಯಿಂದ 117 ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದವರಲ್ಲಿ ಈ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ.
ಈ ಸರ್ಕಾರಿ ಹೈಸ್ಕೂಲ್ ಗೆ ಕಳೆದ ಶೈಕ್ಷಣಿಕ ಸಾಲಿನಲ್ಲಿ 151 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಅವರಲ್ಲಿ 120 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 54 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.ಎನ್ಎಂಎಂಎಸ್ ರಾಷ್ಟ್ರಮಟ್ಟದ ಪ್ರತಿಭಾ ಶೋಧ ಪರೀಕ್ಷೆಯಾಗಿದ್ದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಪ್ರತಿವರ್ಷ ನಡೆಸುತ್ತದೆ. ಪರೀಕ್ಷೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ವರ್ಷಕ್ಕೆ 12 ಸಾವಿರ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ಅದು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪೂರೈಸುವವರೆಗೆ ಅನ್ವಯವಾಗುತ್ತದೆ. ಸ್ಕಾಲರ್ ಷಿಪ್ ಗೆ ಆಯ್ಕೆಯಾದವರು ಮುಂದಿನ ತರಗತಿಗಳಲ್ಲಿ ಕನಿಷ್ಠ ಶೇಕಡಾ 60ರವರೆಗೆ ತೇರ್ಗಡೆ ಹೊಂದಬೇಕು.