ರಾಜ್ಯ

ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅವಘಡ; 'ವರುಣಾ' ಸಮರಭ್ಯಾಸಕ್ಕೆ ಕಾರ್ಮೋಡ

Sumana Upadhyaya
ಕಾರವಾರ: ಭಾರತ-ಫ್ರಾನ್ಸ್ ನೌಕಾ ಸಮರಭ್ಯಾಸಕ್ಕೆ ಇನ್ನು ಕೇವಲ 4 ದಿನಗಳು ಮಾತ್ರ ಉಳಿದಿರುವಾಗ ಭಾರತದ ಒಂದೇ ಒಂದು ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದ ಭಾಗವಹಿಸುವಿಕೆ ಬಗ್ಗೆ ಸಂದೇಹಗಳು ಮೂಡಲಾರಂಭಿಸಿದೆ.
ಭಾರತೀಯ ನೌಕಾಪಡೆಯ ಉನ್ನತ ಮೂಲಗಳು ನ್ಯೂಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ಭಾರತೀಯ ನೌಕೆ ವರುಣ ಸಮರಾಭ್ಯಾಸದಲ್ಲಿ ಭಾಗವಹಿಸಲಿದೆ ಎಂದು ಹೇಳಿದರೆ, ಕಾರವಾರದಲ್ಲಿರುವ ಐಎನ್ಎಸ್ ಕದಂಬ ನೌಕಾನೆಲೆ  ಮಾತ್ರ ಐಎನ್ಎಸ್ ವಿಕ್ರಮಾದಿತ್ಯ ಭಾಗವಹಿಸುವುದು ಸಂಶಯ ಎಂದು ಹೇಳಿದೆ. ನೌಕೆಯನ್ನು ಹೊತ್ತು ಸಾಗುವ ವಾಹಕದಲ್ಲಿ ನಿನ್ನೆ ಬೆಂಕಿ ಅಪಘಾತವುಂಟಾಗಿದ್ದು ಅದರಲ್ಲಿ ಓರ್ವ ನೌಕಾ ಅಧಿಕಾರಿ ಮೃತಪಟ್ಟು ಇತರ 9 ಮಂದಿ ಗಾಯಗೊಂಡಿದ್ದಾರೆ.
ಕೊಚ್ಚಿ ತೀರದಲ್ಲಿ ಆಪರೇಷನಲ್ ಸಾಗರ ತರಬೇತಿಯಲ್ಲಿ ಭಾಗವಹಿಸಿದ ನಂತರ ಐಎನ್ಎಸ್ ವಿಕ್ರಮಾದಿತ್ಯ ಕಾರವಾರದ ತನ್ನ ನೆಲೆಗೆ ಮರಳುತ್ತಿತ್ತು. ಈ ಸಂದರ್ಭದಲ್ಲಿ ಬೆಂಕಿ ಅವಘಡ ಉಂಟಾಗಿದೆ. ಕಾರವಾರ ಮತ್ತು ಗೋವಾ ಸಮುದ್ರ ತೀರದಲ್ಲಿ ಮೇ 1ರಿಂದ 6ರವರೆಗೆ ಭಾರತ-ಫ್ರಾನ್ಸ್ ಜಂಟಿ ನೌಕಾ ಸಮರಭ್ಯಾಸ ನಡೆಯಲಿದ್ದು ಅದರಲ್ಲಿ ಭಾಗವಹಿಸುವ ತಯಾರಿಯನ್ನು ಐಎನ್ಎಸ್ ವಿಕ್ರಮಾದಿತ್ಯ ನಡೆಸುತ್ತಿತ್ತು.
ಅಗ್ನಿ ಅವಘಡದಿಂದ ನೌಕೆಯ ಬೋಗಿಗಳು ಹಾನಿಗೀಡಾಗಿವೆ. ಅದು ಅದರ ಕಾರ್ಯಾಚರಣೆ ಮೇಲೆ ಪರಿಣಾಮ ಬೀರದಿದ್ದರೂ ಕೂಡ ಪುನಃ ಸಹಜ ಸ್ಥಿತಿಗೆ ಮರಳಲು ಒಂದು ತಿಂಗಳು ತೆಗೆದುಕೊಳ್ಳಬಹುದು ಎಂದು ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ.
ಭಾರತ-ಫ್ರಾನ್ಸ್ ಜಂಟಿ ಸಮರಾಭ್ಯಾಸದಲ್ಲಿ ಭಾರತದ ಐಎನ್ಎಸ್ ಚೆನ್ನೈ, ಐಎನ್ಎಸ್ ತಾರ್ಕಾಶ್, ಸಹಾಯಕ ಹಡಗುಗಳು, ಜಲಾಂತರ್ಗಾಮಿಗಳು, ಹೆಲಿಕಾಪ್ಟರ್ ಗಳು ಮತ್ತು ಅದರ ನೂರಾರು ಸಿಬ್ಬಂದಿ ಜಂಟಿ ಅಭ್ಯಾಸದಲ್ಲಿ ಭಾಗವಹಿಸಲಿವೆ. ಅವುಗಳ ಜೊತೆಗೆ ಪರಮಾಣು-ಚಾಲಿತ ವಿಮಾನವಾಹಕ ನೌಕೆ, ಫ್ರಾನ್ಸ್ ನ ಕೆಲವು ವಿನಾಶಕ ಮತ್ತು ಪರಮಾಣು ದಾಳಿ ಜಲಾಂತರ್ಗಾಮಿ ನೌಕೆ ಸಹ ಇರಲಿದೆ.
SCROLL FOR NEXT