ರಾಜ್ಯ

ಬೆಂಗಳೂರು: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ರಸ್ತೆ ತಡೆದು ಪ್ರತಿಭಟನೆ

Nagaraja AB

ಬೆಂಗಳೂರು: 50 ವರ್ಷದ ಕಾಮಾಂಧನೊಬ್ಬ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದರ ವಿರುದ್ಧ ಆಕ್ರೋಶಗೊಂಡ ನಾರಾಯಣಸ್ವಾಮಿ ಲೇಔಟಿನ ನೂರಾರು ನಿವಾಸಿಗಳು ಜೆಸಿ ನಗರ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ನಾರಾಯಣಸ್ವಾಮಿ ಲೇಔಟ್  ನಿವಾಸಿ ಮೊಹಮ್ಮದ್ ಅನ್ವಾರ್ ಬಂಧಿತ ಆರೋಪಿ. ಈತನ ಮೊಮ್ಮಗಳ ಜೊತೆಗೆ ಆಟವಾಡಲು ಮನೆಗೆ ಹೋಗಿದ್ದ ಬಾಲಕಿ ಮೇಲೆ  ಅತ್ಯಾಚಾರ ನಡೆಸಿದ್ದಾನೆ. ಸಂಜೆ ಬಾಲಕಿ ಮನೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ತಾಯಿ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುದ್ದಿ ತಿಳಿದು ಅನ್ವಾರ್ ಮನೆಗೆ ಹೋದ ಬಾಲಕಿಯ ಕುಟುಂಬಸ್ಥರು ಆತನನ್ನು ಹೊಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಆತ ತಪ್ಪಿಸಿಕೊಂಡಿದ್ದಾನೆ. ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಭಯವಾಗಿದೆ. ನಮಗೆ ನ್ಯಾಯ ಬೇಕಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕಿದೆ ಎಂದು ಸ್ಥಳೀಯ ನಿವಾಸಿ ಶೈಲಾಭಾನು ಆಗ್ರಹಿಸಿದ್ದಾರೆ.

ಇಂತಹವರಿಗೆ ಶಿಕ್ಷೆಯಾಗದಿದ್ದರೆ  ಇಂತಹ ಮಕ್ಕಳು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತವೆ. ತಮ್ಮ ಮಗಳಿಗೆ ನ್ಯಾಯ ಬೇಕಾಗಿದೆ ಎಂದು ಬಾಲಕಿಯ ತಾಯಿ ಆಗ್ರಹಪಡಿಸಿದ್ದಾರೆ.

SCROLL FOR NEXT