ಬೆಂಗಳೂರು: ಐಎಂಎ ಬಹು ಕೋಟಿ ವಂಚನೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ), ಐಎಂಎ ಸಂಸ್ಥೆಯ ಮನ್ಸೂರ್ ಮೊಹಮ್ಮದ್ ಖಾನ್ ಗೆ ಸೇರಿದ ಬಹುಮಹಡಿ ಕಟ್ಟಡವೊಂದರ ಮೇಲ್ಭಾಗದಲ್ಲಿನ ಈಜು ಕೊಳದಡಿ ನಿರ್ಮಿಸಲಾಗಿದ್ದ ರಹಸ್ಯ ಲಾಕರ್ನಿಂದ 5,880 ನಕಲಿ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದೆ.
ಎಸ್ಐಟಿ ವಶದಲ್ಲಿರುವ ಖಾನ್, ವಿಚಾರಣೆಯ ವೇಳೆ ಲಾಕರ್ನಲ್ಲಿ ಇಟ್ಟುಕೊಂಡಿದ್ದ ನಕಲಿ ಚಿನ್ನದ ಬಿಸ್ಕತ್ತುಗಳ ಮಾಹಿತಿ ಬಹಿರಂಗಪಡಿಸಿದ್ದಾರೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ದೊಡ್ಡ ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು ತಾನು ನಕಲಿ ಚಿನ್ನದ ಬಿಸ್ಕತ್ತುಗಳನ್ನು ತೋರಿಸುತ್ತಿದೆ ಎಂದು ಖಾನ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.
ಐಎಂಎ ಹಗರಣ ಬೆಳಕಿಗೆ ಬಂದು, ಹೂಡಿಕೆದಾರರು ತಮ್ಮ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾದ ಕೂಡಲೇ ಮನ್ಸೂರ್ ಖಾನ್ ದುಬೈಗೆ ಪರಾರಿಯಾಗಿದ್ದರು. ಜುಲೈ.8 ರಂದು ದುಬೈನಿಂದ ಮರಳಿದ ಆತನನ್ನು ದೆಹಲಿಯ ಜಾರಿ ನಿರ್ದೇಶನಾಲಯ ಮತ್ತು ಎಸ್ಐಟಿ ತಂಡಗಳು ಬಂಧಿಸಿದ್ದವು.
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಮನ್ಸೂರ್ ಖಾನ್ ನನ್ನು ಒಂದು ವಾರಕ್ಕೂ ಹೆಚ್ಚು ಕಾಲ ವಿಚಾರಣೆಗೊಳಪಡಿಸಿತ್ತು. ಪ್ರಸ್ತುತ ಖಾನ್ ಎಸ್ಐಟಿ ವಶದಲ್ಲಿದ್ದಾರೆ.
ಇದೇ ವೇಳೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿದ್ದ ಮನ್ಸೂರ್ ಖಾನ್ ಗೆ ಸೇರಿದ್ದ ಒಟ್ಟಾರೆ 23 ಆಸ್ತಿಗಳನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆದಿದೆ.
ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಗೆ ಸೇರಿದ್ದ ಬೆಂಗಳೂರು, ಚಿಕ್ಕಮಗಳೂರು, ದಾವಂಗೆರೆ, ಹಾಸನ, ಮತ್ತು ಕೋಲಾರದಲ್ಲಿ 300 ಕೋಟಿ ರೂ.ಗಳ ಮೌಲ್ಯದ 23 ಆಸ್ತಿಗಳನ್ನು ನಾವು ವಶಪಡಿಸಿಕೊಂಡಿದ್ದೇವೆ ಎಂದು ಬೆಂಗಳೂರು ನಗರ ಜಿಲ್ಲಾ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos