ರಾಜ್ಯ

ಆ.24ಕ್ಕೆ ಸಂತೋಷ್ ತಮ್ಮಯ್ಯ ಅವರ ಸಮರ ಭೈರವಿ ಪುಸ್ತಕ ಬಿಡುಗಡೆ 

Srinivas Rao BV

ಬೆಂಗಳೂರು: "ಯೋಧ ಸ್ವತಃ ಸರ್ಕಾರದ ಖಜಾನೆಯನ್ನು ಶ್ರೀಮಂತಗೊಳಿಸುವುದಿಲ್ಲ, ಗೋದಾಮುಗಳನ್ನು ತುಂಬುವುದಿಲ್ಲ, ಆದರೆ ಅವೆಲ್ಲವೂ ಆಗುವುದನ್ನು ಖಾತ್ರಿಪಡಿಸುತ್ತಾನೆ. ಹೀಗಾಗಿ ಆತ ನಮ್ಮ ಗೌರವ, ಸಂಸ್ಕೃತಿ, ಭೌತಿಕ ಯೋಗಕ್ಷೇಮ ಮತ್ತು ಸಮೃದ್ಧಿಯ ಮೂಲಾಧಾರ. ಯೋಧ ರಾಷ್ಟ್ರ ನಿರ್ಮಾಣ ಕೈಂಕರ್ಯದ ಆಧಾರ ಸ್ತಂಭ" ಇವು ಶತಮಾನಗಳ ಹಿಂದೆ ಮಗಧ ಸಾಮ್ರಾಟನಿಗೆ ಆಚಾರ್ಯ ಚಾಣಕ್ಯನ ಮಾತುಗಳು.  

ಭಾರತೀಯ ಯೋಧರು ಪರಂಪರೆಯಿಂದ ಶಕ್ತಿಯನ್ನು ಪಡೆದವರು. ಭಾರತೀಯ ಕ್ಷಾತ್ರ ಪರಂಪರೆಯನ್ನು ಅವಿಚ್ಛಿನ್ನವಾಗಿ  ಗಂಗಾ ಪ್ರವಾಹದಂತೆ ನಿರಂತರವಾಗಿ ಕಾಪಿಟ್ಟುಕೊಂಡು ರಕ್ಷಿಸಿರುವ ಭಾರತೀಯ ಸೈನ್ಯ, ಸೈನಿಕ, ಸಮರಗಳ ಕುರಿತು ಪತ್ರಕರ್ತ, ಖ್ಯಾತ ಲೇಖಕ, ಅಂಕಣಕಾರ ಸಂತೋಷ್ ತಮ್ಮಯ್ಯ ಅವರ ಪುಸ್ತಕ ಸಮರ ಭೈರವಿ ಆ.24 ರಂದು ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಸಂಜೆ: 5:೦೦ ಗಂಟೆಗೆ ಬಿಡುಗಡೆಯಾಗಲಿದೆ. 

ಸಂತೋಷ್ ತಮ್ಮಯ್ಯ ಅವರ ಸೈನ್ಯಕ್ಕೆ ಸಂಬಂಧಿಸಿದ ಉಘೇ ವೀರಭೂಮಿಗೆ ಅಂಕಣ ಬರಹ ಅಪಾರ ಜನಪ್ರಿಯತೆ ಹೊಂದಿದೆ. ಸಮರ ಭೈರವಿ ಪುಸ್ತಕದಲ್ಲಿ ಸೈನ್ಯ, ಸೈನಿಕ, ಸಮರಗಳ ಕುರಿತ ರೋಚಕ, ಭಾರತೀಯರು ಹೆಮ್ಮೆ ಪಡುವ ಸಂಗತಿಗಳನ್ನು ತಮ್ಮ ಎಂದಿನ ಹರಿತ ಲೇಖನಿಯಲ್ಲಿ, ಭಾವನಾತ್ಮಕ, ಸಂವೇದನಾತ್ಮಕ ಶೈಲಿಯಲ್ಲಿ ಓದುಗನ ಹೃದಯಕ್ಕೆ ತಲುಪುವಂತೆ ಬರೆದಿದ್ದಾರೆ.  ಮಾಜಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬೆನ್ನುಡಿ ಇರುವ ಈ ಪುಸ್ತಕವನ್ನು ಕೇಂದ್ರ ಸಚಿವ ಜನರಲ್ (ನಿವೃತ್ತ) ವಿ.ಕೆ ಸಿಂಗ್ ಬಿಡುಗಡೆ ಮಾಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಮುಖ್ಯ ಅತಿಥಿಗಳಾಗಿದ್ದು, ಸುವರ್ಣ ನ್ಯೂಸ್ ನ ಮುಖ್ಯಸ್ಥ ಅಜಿತ್ ಹನಮಕ್ಕನವರ್ ಕೃತಿ ಪರಿಚಯ ಮಾಡಲಿದ್ದಾರೆ.  ಲೆಫ್ಟಿನೆಂಟ್ ಕರ್ನಲ್ ಪಿ.ಎಸ್ ಗಣಪತಿ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕಾರ್ಯಕ್ರಮದ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. 

ಆ. 23-24 ಕೃಷ್ಣ ಜನ್ಮಾಷ್ಟಮಿ ಆಚರಣೆಯೂ ಇದೆ. ಗೀತೋಪದೇಶ ಮಾಡಿ ಮಂಕು ಕವಿದಿದ್ದ ಕ್ಷಾತ್ರವನ್ನುದ್ಧರಿಸಿದ ಯುಗಪುರುಷ ಹುಟ್ಟಿದ ದಿನ. ಹಾಗಾದರೆ ರಣರಂಗದಲ್ಲಿ ವಿಸ್ಮೃತಿಯನ್ನು ತೊಲಗಿಸಿದ ಕೃಷ್ಣನ ಜನ್ಮದಿನವನ್ನು, ರಣರಂಗದ ಅಮರಸ್ಮೃತಿಗಳೊಂದಿಗೆ ಆಚರಿಸೋಣ....    

SCROLL FOR NEXT