ರಾಜ್ಯ

ಬೆಂಗಳೂರು: ಬೈಕ್ ಗೆ ಟಾಟಾ ಏಸ್ ಡಿಕ್ಕಿ, ಮುಖ್ಯ ಪೊಲೀಸ್ ಪೇದೆ ಪುತ್ರ ಸಾವು

Lingaraj Badiger

ಬೆಂಗಳೂರು: ಟಾಟಾ ಏಸ್ ಸರಕು ಸಾಗಣೆ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗಲೂರು ರಸ್ತೆಯಲ್ಲಿ ನಡೆದಿದೆ.

ಕೆ ಆರ್ ಪುರಂ ಪೊಲೀಸ್ ಠಾಣೆಯ ಮುಖ್ಯಪೇದೆ ಬುದ್ದೇಗೌಡ ಅವರ ಪುತ್ರ ರೇವಾ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿ ಧನುಷ್(19) ಮೃತಪಟ್ಟವರು.

ಧನುಷ್ ನಿನ್ನೆ ಬೆಳಿಗ್ಗೆ 8.30ರ ವೇಳೆ ಕಾಲೇಜಿಗೆ ಬೈಕ್‍ನಲ್ಲಿ ಬಾಗಲೂರು ಸಾತನೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಮಾರ್ಗ ಮಧ್ಯೆ ಮುಂದೆ ಹೋಗುತ್ತಿದ್ದ ಟಾಟಾ ಏಸ್ ಸರಕು ಸಾಗಣೆ ವಾಹನ ಏಕಾಏಕಿ ಎಡಗಡೆ ತಿರುವು ತೆಗೆದುಕೊಂಡಿದ್ದರಿಂದ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದು ಕೆಳಗೆಬಿದ್ದ ಧನುಷ್ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಮಾನಸ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಮಗನ ಸಾವಿನ ಸುದ್ದಿ ಕೇಳಿ ಆಘಾತಗೊಂಡು ಅಸ್ವಸ್ಥರಾಗಿದ್ದ  ಬುದ್ದೇಗೌಡ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಜಾಲ ಸಂಚಾರ ಪೊಲೀಸ್ ಇನ್ಸ್ ಪೆಕ್ಟರ್ ವೀರೇಂದ್ರಕುಮಾರ್ ಅವರು, ಟಾಟಾ ಏಸ್ ಲಗೇಜ್ ವಾಹನ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

SCROLL FOR NEXT