ಕಾಗವಾಡ: ನಿಮಗೆಲ್ಲರಿಗೂ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹೌದು ಹುಲಿಯಾ ಹೇಳಿಕೆ ವೈರಲ್ ಆಗಿದ್ದು ಗೊತ್ತೇ ಇದೆ. ಕೆಲವೇ ದಿನಗಳಲ್ಲಿ ಆ ಹೇಳಿಕೆಯ ಹಿರೋ ಯಾರೆಂಬುದೂ ಗೊತ್ತಾಗಿತ್ತು. ಈಗ ಆತ ಬಿಜೆಪಿ ಜೊತೆ ಕೈ ಮಿಲಾಯಿಸಿ ರಾಜಾಹುಲಿ ಅಂತಿದ್ದಾರೆ.
ಉಪಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಹೌದು ಹುಲಿಯಾ ಖ್ಯಾತಿಯ ಪೀರಪ್ಪ ಕಟ್ಟಿಮನಿ ಬಿಜೆಪಿ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಕಾಗವಾಡ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಜಯ ಗಳಿಸುತ್ತಿದ್ದಂತೆಯೇ ಹೌದು ಹುಲಿಯಾ ಖ್ಯಾತಿಯ ಪೀರಪ್ಪ ಕಟ್ಟಿಮನಿ ಬಿಜೆಪಿ ಶಾಲು ಧರಿಸಿ, ತಲೆಗೆ ಬಿಜೆಪಿಯ ಕಮಲದ ಟೋಪಿ ಧರಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.
ಕಾಗವಾಡ ಕ್ಷೇತ್ರದಲ್ಲಿ ನಡೆದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಮಾಡುವಾಗ ಇದೇ ಪೀರಪ್ಪ ‘ಹೌದೋ ಹುಲಿಯಾ’ ಎಂದಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಾನು ಸಿದ್ದರಾಮಯ್ಯ ಕಟ್ಟಾ ಅಭಿಮಾನಿ ಎಂದಿದ್ದ ಪೀರಪ್ಪ ಫಲಿತಾಂಶ ಬರುತ್ತಿದ್ದಂತೆಯೇ ಬಿಜೆಪಿಯವರ ಜೊತೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.