ಚಿತ್ರದುರ್ಗ: ಮೂರು ಲಾರಿಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ ಏಳು ಮಂದಿಗೆ ಗಾಯಗಳಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಿಕ್ಕಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ನಡೆದಿದೆ.
ಲಾರಿಗಳು ಬೆಂಗಳೂರು-ಹರಿಯಾಣ, ಹೊಸಕೋಟೆ-ಬೆಂಗಳೂರು ಮಾರ್ಗದಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಲಾರಿ ಚಾಲಕ ಸಾವನ್ನಪ್ಪಿದ್ದು ಆತನ ಗುರುತು ಪತ್ತೆಯಾಗಿಲ್ಲ.
ಇತ್ತ ಗದಗದಿಂದ ಬೆಂಗಳೂರಿಗೆ ಈರುಳ್ಳಿ ತುಂಬಿ ಸಾಗಿಸುತ್ತಿದ್ದ ಲಾರಿಗೆ ಕ್ಯಾಂಟರ್ ಢಿಕ್ಕಿಯಾದ ಪರಿಣಾಮ ಲಾರಿಯಲ್ಲಿದ್ದ ಚಾಲಕ ಸೇರಿ ಏಳು ಮಂದಿ ರೈತರು ಗಾಯಗೊಂಡಿದ್ದಾರೆ. ಗಾಯಾಳು ರೈತರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿಯಾಗಿದೆ.
ಘಟನೆ ಸಂಬಂಧ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.