ಬೆಂಗಳೂರು: ವಿಜ್ಞಾನ, ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಯಶಸ್ಸು ಸಾಧಿಸುವ ಉದ್ದೇಶವನ್ನು ಹೊಂದಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನಕ್ಕೆ ಜ,3 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ.
ಸಮ್ಮೇಳನ ಉದ್ಘಾಟನೆಗೊಳ್ಳುವ ದಿನವೇ ನಗರದಲ್ಲಿ ರೈತರ ಸಮಾವೇಶ ಕೂಡ ಇದ್ದು, ಈ ಸಮಾವೇಶದಲ್ಲಿಯೂ ಮೋದಿಯವರು ಪಾಲ್ಗೊಂಡು ರೈತರನ್ನುದ್ದೇಶಿ ಮಾತನಾಡಲಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಸಿಎಂ ಯಡಿಯೂರಪ್ಪ ಅವರು, ಜ.3 ರಂದು ರೈತರ ಸಮಾವೇಶ ಹಿನ್ನೆಲೆಯಲ್ಲಿ ಜನವರಿ 2 ರಂದು ಪ್ರಧಾನಿ ಮೋದಿಯವರು ನಗರಕ್ಕೆ ಆಗಮಿಸಲಿದ್ದಾರೆ. ತುಮಕೂರಿನಲ್ಲಿ ರೈತರ ಸಮಾವೇಶ ನಡೆಯಲಿದ್ದು, ಸಮಾವೇಳ ಕುರಿತು ಚರ್ಚೆಗಳು ನಡೆಯುತ್ತಿವೆ. ಅಂತಿಮ ಮಾಹಿತಿಗಳಿಗಾಗಿ ಪ್ರಧಾನಮಂತ್ರಿಗಳ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ರ್ಯಾಲಿಯಲ್ಲಿ ದೊಡ್ಡ ಮಟ್ಟದಲ್ಲಿ ರೈತರು ಸೇರಲಿದ್ದಾರೆ. ಜ.3 ರಂದು 5 ದಿನಗಳ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್'ಗೆ ಚಾಲನೆ ನೀಡಲಿದ್ದಾರೆಂದ ಹೇಳಿದ್ದಾರೆ.
ಈ ಬಾರಿಯ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಕೃಷಿ ಮತ್ತು ವನ ವಿಜ್ಞಾನ, ಜಾನುವಾರು, ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ, ಮಾನವ ಶಾಸ್ತ್ರ ಮತ್ತು ನಡವಳಿಕೆ ವಿಜ್ಞಾನ, ರಸಾಯನಿಕ ವಿಜ್ಞಾನಗಳು, ಭೂ ರಚನಾ ವ್ಯವಸ್ಥೆ- ಎಂಜಿನಿಯರಿಂಗ್, ಪರಿಸರ ವಿಜ್ಞಾನಗಳು, ಮಾಹಿತಿ ಸಂವಹನ ವಿಜ್ಞಾನ-ತಂತ್ರಜ್ಞಾನ, ಗಣಿತ, ವೈದ್ಯಕೀಯ ವಿಜ್ಞಾನ, ಭೌತಿಕ ವಿಜ್ಞಾನ, ಸಸ್ಯ ವಿಜ್ಞಾನಗಳು ಮುಖ್ಯ ವಿಷಯಗಳಾಗಿರಲಿವೆ ಎಂದು ತಿಳಿದುಬಂದಿದೆ.
ಸಮ್ಮೇಳನದಲ್ಲಿ ವಿದೇಶಿ ಸಂಸ್ಥೆಗಳಿಂದ ನೊಬೆಲ್ ಪ್ರಶಸ್ತಿ ವಿಜೇತರು, ವಿಜ್ಞಾನಿಗಳು, ವಿದ್ವಾಂಸರು ಹಾಗೂ ಪ್ರಧಾನ ಉಪನ್ಯಾಸಕರು, ಕಾರ್ಯನೀತಿ ರಚಿಸುವವರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು ಅನೇಕ ಗಣ್ಯರು ಭಾಗವಹಿಸಲಿದ್ದಾರೆ.