ರಾಜ್ಯ

ಪ್ರವಾಸಿ ತಾಣಗಳಾದ ನಂದಿಬೆಟ್ಟ, ಮುತ್ತತ್ತಿಯಲ್ಲಿ ವರ್ಷಾಚರಣೆ ನಿಷೇಧ

Nagaraja AB

ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಸ್ವಾಗತಿಸುವ ಸಂದರ್ಭದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸುಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. 

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ಕುರಿತು ಆದೇಶ ಹೊರಡಿಸಿದೆ. ನಂದಿ ಗ್ರಾಮದ ಬಳಿಯ ನಂದಿಗಿರಿಧಾಮಕ್ಕೆ ಡಿಸೆಂಬರ್ 31ರ ಸಂಜೆ 4 ಗಂಟೆಯಿಂದ, ಹೊಸ ವರ್ಷ 2020ರ ಜನವರಿ 1ರ ಬೆಳಿಗ್ಗೆ 8 ಗಂಟೆಯವರೆಗೆ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ. 

ಹೊಸ ವರ್ಷಾಚರಣೆ ಅಂಗವಾಗಿ ನಂದಿಗಿರಿಧಾಮಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದ್ದು, ಇದರಿಂದ ನಂದಿಗಿರಿಧಾಮದ ಪರಿಸರ ಹಾಗೂ ಪಾವಿತ್ರ್ಯತೆಯನ್ನ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಮತ್ತೊಂದೆಡೆ ಕನಕಪುರ ತಾಲೂಕಿನ ಸಾತನೂರು ಹೋಬಳ್ಳಿಯ ಭೂವಳ್ಳಿ ಗ್ರಾಮದ ಅರಣ್ಯ ಗಡಿಯಲ್ಲಿರುವ ಅರಣ್ಯ ಚೆಕ್ ಪೋಸ್ಟ್ ಬಳಿ ಹೊಸ ವರ್ಷದ ಆಚರಣೆ ಮಾಡಲು ಮುತ್ತತ್ತಿಗೆ ತೆರಳುವ ಪ್ರವಾಸಿಗರನ್ನು ನಿಷೇಧಿಸಲಾಗಿದೆ. 

ಪ್ರವಾಸಿಗರು ಹೊಸ ವರ್ಷ ಆಚರಣೆ ನೆಪದಲ್ಲಿ ಮೋಜು, ಮಸ್ತಿ ಪಾರ್ಟಿಗಳನ್ನು ಏರ್ಪಡಿಸುವುದರಿಂದ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹೊಸ ವರ್ಷ ಆಚರಣೆಯನ್ನು ಪ್ರವಾಸಿ ತಾಣವಾದ ಮುತ್ತತ್ತಿಯಲ್ಲಿ ನಿಷೇಧಿಸಿದೆ. 

SCROLL FOR NEXT