ಬೆಂಗಳೂರು: ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಮರುಜನ್ಮ ಪಡೆದಿರುವ ನಾನು ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಕ್ಯಾನ್ಸರ್ನಿಂದ ಗುಣಹೊಂದಿದ ನಿದರ್ಶನಗಳ ಹುಡುಕಾಟದಲ್ಲಿದ್ದೆ ಎಂದು ಬಾಲಿವುಡ್ ನಟಿ ಮನೀಷಾ ಕೊಯಿರಾಲಾ ಹೇಳಿದರು.
ಕ್ಯಾನ್ಸರ್ನೊಂದಿಗೆ ಹೋರಾಟ ನಡೆಸಿದ ನನಗೆ ಇದು ಎರಡನೇ ಜನ್ಮವಾಗಿದ್ದು, ಚಿಕಿತ್ಸೆ ಯ ಹಂತದಲ್ಲಿ ಎದುರಾದ ಮಾನಸಿಕ ಹಾಗೂ ದೈಹಿಕ ಸಮಸ್ಯೆ, ಅದನ್ನು ಎದುರಿಸಿದ ಸಂದರ್ಭಗಳ ಕುರಿತು ತಾವು ಬರೆದಿರುವ 'ಹೀಲ್ಡ್' ಪುಸ್ತಕದಲ್ಲಿ ವಿವರಿಸಿದ್ದೇನೆ ಎಂದು ತಿಳಿಸಿದರು.
ಅಂಡಾಶಯದ ಕ್ಯಾನ್ಸರ್ನಿಂದ ಬದುಕುಳಿದವರು, ಜೀವನಶೈಲಿಯ ಮಾರ್ಪಾಡಿನಿಂದ ಕ್ಯಾನ್ಸರ್ ತಡೆಗಟ್ಟಲು ಸಾಧ್ಯ ಎಂದ ಅವರು, ನಾನು ಅಮೆರಿಕದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇನೆ. ಭಾರತದಲ್ಲಿ ನಗರ ಪ್ರದೇಶಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಬಹಳಷ್ಟು ಆರೋಗ್ಯ ಕೇಂದ್ರಗಳಿವೆ. ಆದರೆ ಗ್ರಾಮೀಣ ಭಾಗಗಳಲ್ಲೂ ಸಮರ್ಪಕ ಚಿಕಿತ್ಸೆ ಸಿಗುವಂತಾಗಬೇಕು ಎಂದರು.
ಕೊನೆಯ ಹಂತದಲ್ಲಿ ನನಗೆ ಕ್ಯಾನ್ಸರ್ ಪತ್ತೆಯಾಗಿದೆ. ಆದಾಗಿಯೂ ನಾನು ಇಲ್ಲಿದ್ದೇನೆ. ಅಂಡಾಶಯದ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲದಿರುವುದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿದಾಗ ಕ್ಯಾನ್ಸರ್ ದಾಳಿಯಾಗುತ್ತದೆ. ಇಂದ ಸಂದರ್ಭದಲ್ಲಿ ಚಿಕಿತ್ಸೆ ತುಂಬಾ ದುಬಾರಿಯಾಗಿರುತ್ತದೆ. ಇದೆಲ್ಲ ರೋಗಿಯನ್ನು ಮತ್ತಷ್ಟು ಜರ್ಜರಿತಗೊಳಿಸುತ್ತದೆ. ಇಂತಹ ಸಂದರ್ಭದಲ್ಲಿ ಸಕಾರಾತ್ಮಕ ಮನೋಭಾವನೆ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ರೋಗವನ್ನು ಗೆಲ್ಲಬಹುದಾಗಿದೆ.
ಇನ್ನು ಕಾಯಿಲೆ ಬಂದ ನಂತರ ಎದುರಿಸುವುದಕ್ಕಿಂತ ಬಾರದಂತೆ ತಡೆಯುವ ನಿಟ್ಟಿನಲ್ಲಿ ಜಾಗ್ರತೆ ವಹಿಸುವುದರೊಂದಿಗೆ ಶೀಘ್ರ ಪತ್ತೆ ಹೆಚ್ಚಿ ಸಕಾಲಕ್ಕೆ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದರು.