ಮೈಸೂರು/ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚನ್ನು ನಂದಿಸಲು ಭಾರತೀಯ ವಾಯುಪಡೆ, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಕಾರ್ಯಕರ್ತರು ಸತತ 5 ದಿನಗಳ ಕಾರ್ಯಾಚರಣೆ ನಡೆಸಿದ ನಂತರ ಯಶಸ್ವಿಯಾಗಿದ್ದು ಇದೀಗ ಬೆಂಕಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ.
ಕಳೆದ ಬುಧವಾರ ಬಂಡೀಪುರ ರಾಷ್ಟ್ರೀಯ ಅರಣ್ಯದಲ್ಲಿ ಬೆಂಕಿ ಹತ್ತಿ ಉರಿದುಕೊಂಡು ನಂತರ ತನ್ನ ಕೆನ್ನಾಲಿಗೆಯನ್ನು ಸುತ್ತಮುತ್ತಲ ಪ್ರದೇಶಗಳಿಗೆ ವ್ಯಾಪಿಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸಾಂಪ್ರದಾಯಿಕ ವಿಧಾನಗಳ ಮೂಲಕ ಕಾಡ್ಗಿಚ್ಚನ್ನು ನಂದಿಸಲು ಪ್ರಯತ್ನಿಸಿದರಾದರೂ ಅದು ಹೆಚ್ಚಿನ ಫಲ ಕೊಡಲಿಲ್ಲ. ಕಳೆದ ಎರಡು ದಿನಗಳಲ್ಲಿ ಭಾರತೀಯ ವಾಯುಪಡೆ ನಡೆಸಿದ ಬಂಪಿ ಬಕೆಟ್ ಕಾರ್ಯಾಚರಣೆ ಫಲಶ್ರುತಿ ನೀಡಿದೆ.
ಬಂಪಿ ಬಕೆಟ್ ಕಾರ್ಯಾಚರಣೆಯಲ್ಲಿ ಎರಡು ಹೆಲಿಕಾಪ್ಟರ್ ಗಳ ಮೂಲಕ 19 ಸಾವಿರ ಲೀಟರ್ ನೀರನ್ನು ಹಾಸಲಾಗಿತ್ತು. ಮೈಸೂರಿನಲ್ಲಿ ಹೆಲಿಕಾಪ್ಟರ್ ಸಜ್ಜಾಗಿದ್ದು ಯಾವುದೇ ಕ್ಷಣದಲ್ಲಿ ಬೆಂಕಿ ಕಾಣಿಸಿಕೊಂಡರೆ ಮತ್ತೆ ಅರಣ್ಯಕ್ಕೆ ನೀರು ಹಾಯಿಸುವ ಯೋಜನೆ ವಾಯುಪಡೆಯದ್ದಾಗಿತ್ತು. ಕಳೆದ ಸೋಮವಾರ ಮತ್ತು ಮಂಗಳವಾರ ಸೇರಿ 10 ಕಡೆಗಳಲ್ಲಿ ಸುಮಾರು 30 ಸಾವಿರ ಲೀಟರ್ ನೀರನ್ನು ಹರಿಸಿದ್ದಾರೆ.
ನಿನ್ನೆ ಬೆಳಗ್ಗೆ ಗೋಪಾಲಸ್ವಾಮಿ ಬೆಟ್ಟದ ಮೇಲೆ ಹೆಲಿಕಾಪ್ಟರ್ ಮೂಲಕ ನೀರು ಹಾಯಿಸಲಾಗಿತ್ತು. ಕರಡಿಹಳ್ಳ, ಚಮ್ಮನಹಳ್ಳಿ, ಮೂಲೆಹೊಳೆ ಮತತು ಕೇರಳ ಹಾಗೂ ತಮಿಳು ನಾಡಿನ ಗಡಿ ಭಾಗಗಳಲ್ಲಿ ಹೆಲಿಕಾಪ್ಟರ್ ಗಳಿಂದ ನೀರು ಸಿಂಪಡಿಸಲಾಗಿದೆ. ಗಾಳಿಯಲ್ಲಿ ಸಾಂದ್ರತೆ ಕಡಿಮೆಯಾಗಿದ್ದು ಕೂಡ ಬೆಂಕಿ ನಂದಿಸಲು ವರವಾಯಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos