ಚಿನ್ನಾಭರಣ, ಬೈಕ್ ಕಳೆದುಕೊಂಡ ಸಂತ್ರಸ್ತರಿಗೆ ಬೆಂಗಳೂರು ಪೊಲೀಸರಿಂದ ನ್ಯೂ ಇಯರ್ ಗಿಫ್ಟ್!
ಬೆಂಗಳೂರು: ಬೈಕ್ ಹಾಗೂ ಚಿನ್ನಾಭರಣ ಕಳೆದುಕೊಂಡಿದ್ದ ಸಂತ್ರಸ್ತ ಜನರಿಗೆ ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ನಗರ ಪೊಲೀಸರು ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಈ ಮೂಲಕ ನೂತನ ವರ್ಷವನ್ನು ಸ್ವಾಗತಿಸಿದ್ದಾರೆ.
ಚಿನ್ನಾಭರಣ, ಬೈಕ್ ಗಳನ್ನು ಕಳೆದುಕೊಂಡಿದ್ದ ಸಂತ್ರಸ್ತ ಜನರ ಮನೆ ಬಾಗಿಲಿಗೇ ತೆರಳಿರುವ ಪೊಲೀಸರು ಸರ್ ಪ್ರೈಸ್ ಗಿಫ್ಟ್ ಗಳನ್ನು ನೀಡಿದ್ದಾರೆ.
ರಾತ್ರೋರಾತ್ರಿ ಜನರ ಮನೆ ಬಾಗಿಲಿಗೆ ತೆರಳಿರುವ ಪೊಲೀಸರು ಬಾಗಿಲು ಬಡಿದು, ತೆಗೆಯುಂತೆ ತಿಳಿಸಿದ್ದಾರೆ. ಈ ವೇಳೆ ಗಾಬರಿಯಿಂದ ಮನೆ ಬಾಗಿಲು ತೆಗೆದ ಜನರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಬಾಗಿಲು ತೆಗೆದ ಬಳಿಕ ಪೊಲೀಸರು ಹ್ಯಾಪಿ ನ್ಯೂ ಇಯರ್ ಎಂದು ಹೇಳಿ ಅವರು ಕಳೆದುಕೊಂಡಿದ್ದ ವಸ್ತುಗಳನ್ನು ಮರಳಿ ನೀಡಿದ್ದಾರೆ.
ಕಳ್ಳತನವಾಗಿದ್ದ ಚಿನ್ನವನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದ ನಗರ ಪೊಲೀಸರು, ಜನತೆಗೆ ಸರ್ ಪ್ರೈಸ್ ಆಗಿ ನೀಡಬೇಕೆಂಬ ಕಾರಣಕ್ಕೆ ತಮ್ಮ ಬಳಿಯೇ ಇಟ್ಟುಕೊಂಡು ಸುಮ್ಮನಿದ್ದರು. ಇದರಂತೆ ನಿನ್ನೆ ಮಧ್ಯರಾತ್ರಿ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ರವಿ ಚನ್ನಣ್ಣನವರ್, ಡಿಸಿಪಿ ಅಣ್ಣಾಮಲೈ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿನ್ನ ಕಳೆದುಕೊಂಡವರ ಮನೆಗೆ ತೆರಳಿ ಬಂಗಾರವನ್ನು ವಾಪಸ್ ನೀಡಿದ್ದಾರೆ. ಇದರಿಂದ ಹೊಸ ವರ್ಷದ ದಿನದಂದು ಜನತೆ ಸಂತಸ ಪಟ್ಟಿದ್ದಾರೆ. ಕಳೆದು ಹೋದ ವಸ್ತುಗಳನ್ನು ವಾಪಸ್ ನೀಡಿದ್ದಕ್ಕೆ ಪೊಲೀಸರಿಗೆ ಜನತೆ ಕೂಡ ಧನ್ಯವಾದಗಳನ್ನು ಹೇಳಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳು ವ್ಯಕ್ತವಾಗತೊಡಗಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos