ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.
ಮಹಮ್ಮದ್ ಸುಹೈದ್, ಸಹೀರ್ ಹಾಗೂ ಫಿರ್ಝಾನ್ ಮೃತಪಟ್ಟ ವಿದ್ಯಾರ್ಥಿಗಳು. ಮೂವರು ವಿದ್ಯಾರ್ಥಿಗಳು ಉಪ್ಪಿನಂಗಡಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು.
ಫಿರ್ಯಾನ್ ನ ಬರ್ತ್ ಡೇ ಪಾರ್ಟಿಗೆಂದು ಉಪ್ಪಿನಂಗಡಿ ಜ್ಯೂನಿಯರ್ ಕಾಲೇಜ್ನ ಒಟ್ಟು 18 ಮಂದಿ ವಿದ್ಯಾರ್ಥಿಗಳು ನೇತ್ರಾವತಿ ನದಿ ತೀರಕ್ಕೆಂದು ತೆರಳಿ ಕೇಕ್ ಕತ್ತರಿಸಿ ಜನ್ಮದಿನಾಚರಣೆ ಸಂಭ್ರಮ ಆಚರಿಸಿಕೊಂಡಿದ್ದಾರೆ. ಆ ಬಳಿಕ 15 ಮಂದಿ ವಾಪಸಾಗಿದ್ದಾರೆ.
ಫಿರ್ಯಾನ್ ಮುಖಕ್ಕೆ ಅಂಟಿಕೊಂಡಿದ್ದ ಕೇಕ್ ತೊಳೆಯಲೆಂದು ನದಿಗೆ ಇಳಿದಿದ್ದು, ಅಂತ್ಯಂತ ಆಳದ ಗುಂಡಿಗೆ ಇಳಿದಿದ್ದು ನೀರು ಪಾಲಾಗಿದ್ದಾನೆ. ಆತನ ರಕ್ಷಣೆಗೆ ತೆರಳಿದ್ದ ಇನ್ನುಳಿದ ಇಬ್ಬರು ವಿದ್ಯಾರ್ಥಿಗಳು ಸಹ ನೀರು ಪಾಲಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ನೇತ್ರಾವತಿ ನದಿ ಪಕ್ಕದಲ್ಲಿ ಸುಹೈದ್ ಮನೆಯಿದ್ದು, ಇಂದು ಬೆಳಗ್ಗೆ ಆತನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಈ ವೇಳೆ ಸಹೀರ್ ಹಾಗೂ ಫಿರ್ಝಾನ್ ಅವರನ್ನು ನದಿಯಲ್ಲಿ ಹುಡುಕಾಟ ನಡೆಸುವಾಗ ಅವರ ಮೃತದೇಹ ಕೂಡ ಪತ್ತೆಯಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.