ಭಾರತ್ ಬಂದ್: ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚಲು ಅಂಗಡಿ ಬಂದ್ ಮಾಡಿದ ಮಾಲೀಕ!
ಬೆಂಗಳೂರು: ಭಾರತ್ ಬಂದ್'ಗೆ ಕರೆ ನೀಡಿದ್ದರು, ಚಿಕ್ಕಪೇಟೆಯಲ್ಲಿ ಹಲವಾರು ಅಂಗಡಿಗಳು ಎಂದಿನಂತೆ ತಮ್ಮ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿದ್ದವು. ಆದರೆ, ಇಲ್ಲೊಬ್ಬ ವ್ಯಕ್ತಿ ಮಾತ್ರ ತಮ್ಮ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಬಂದ್ ಹಿನ್ನಲೆಯಲ್ಲಿ ಬಸ್ ನಿಲ್ದಾಣ ಹಾಗೂ ರಸ್ತೆ ಬದಿಗಳಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ವೃದ್ಧರು, ರೋಗಿಗಳು ಹಾಗೂ ಅಂಗವಿಕಲಿಗೆ ಸಹಾಯ ಮಾಡುವ ಸಲುವಾಗಿಯೇ ಸಭಾಪತಿ (56) ಎಂಬ ವ್ಯಕ್ತಿ ತಮ್ಮ ಅಂಗಡಿ ಮುಚ್ಚಿ ವಹಿವಾಟುಗಳನ್ನು ಬಂದ್ ಮಾಡಿದ್ದಾರೆ.
ಬಂದ್ ಆಚರಿಸಿದಾಗಲೆಲ್ಲಾ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಪ್ರಮುಖವಾಗಿ ರೋಗಿಗಳು. ಸಾರಿಗೆ ಸಂಪರ್ಕಗಳಿಲ್ಲದ ಕಾರಣ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಹೀಗಾಗಿ ಬಂದ್ ಇರುವ ದಿನ ನಾನು ನನ್ನ ಕಾರಿನಲ್ಲಿ ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡುತ್ತಿರುತ್ತೇನೆ. ಮಂಗಳವಾರ ದೇಶದಾದ್ಯಂತ ಬಂದ್ ಆಚರಿಸಲಾಗುತ್ತಿತ್ತು. ಕೆಎಸ್ಆರ್'ಟಿಸಿ ಬಸ್ ನಿಲ್ದಾಣದಲ್ಲಿ ಸಣ್ಣ ಮಗುವನ್ನು ಎತ್ತಿಕೊಂಡಿದ್ದ ದಂಪತಿಗಳು ಕಣ್ಣಿಗೆ ಬ್ದಿದ್ದರು. ದಂಪತಿಗಳು ರಾಯಚೂರು ಮೂಲದವರಾಗಿದ್ದು, ಮಗುವಿಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿಗೆ ಬಂದಿದ್ದರು. ಆಟೋ ರಿಕ್ಷಾದವರು ದುಪ್ಪಟ್ಟು ಹಣವನ್ನು ಕೇಳಿದ್ದಾರೆ. ಇದರಿಂದ ಸಾಧ್ಯವಾಗದೆ, ನಿಲ್ದಾಣದಲ್ಲಿಯೇ ನಿಂತಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಡು ಸಹಾಯ ಮಾಡಿದೆ. ಬಳಿಕ ಅಲ್ಲಿಂದ ನಾಲ್ವರನ್ನು ಯಲಹಂಕಕ್ಕೆ ಡ್ರಾಪ್ ಮಾಡಿದ್ದೆ ಎಂದು ಸಭಾಪತಿಯವರು ಹೇಳಿದ್ದಾರೆ.
ಕೆಲ ವರ್ಷಗಳ ಹಿಂದೆ ವ್ಯವಹಾರ ನಿಮಿತ್ತ ಕೇರಳ ರಾಜ್ಯಕ್ಕೆ ಭೇಟಿ ನೀಡಿದ್ದೆ. ಈ ವೇಳೆ ರಾಜ್ಯದಲ್ಲಿ ಬಂದ್ ಆಚರಿಸಲಾಗುತ್ತಿದ್ದು, ಸೀರೆಗಳನ್ನು ಇಟ್ಟುಕೊಂಡಿದ್ದ ಎರಡು ದೊಡ್ಡ ದೊಡ್ಡ ಬ್ಯಾಗ್ ಗಳು ನನ್ನ ಬಳಿಯಿದ್ದವು. ಈ ವೇಳೆ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬರು ನನಗೆ ಸಹಾಯ ಮಾಡಿದ್ದರು. ಅಂದಿನಿಂದ ನಾನೂ ಕೂಡ ಬಂದ್ ಆಚರಣೆ ವೇಳೆ ಜನರಿಗೆ ಸಹಾಯ ಮಾಡುತ್ತಿದ್ದೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos