ಮಂಡ್ಯ: ಕಿಡ್ನಿ ಮಾರಿ ಶ್ರೀಮಂತಳಾಗಲು ಹೋಗಿ ಮೋಸಹೋದ ಮಹಿಳೆ ಆತ್ಮಹತ್ಯೆ!
ಮಂಡ್ಯ: ತನ್ನ ಕಿಡ್ನಿಯನ್ನು ಮಾರಾಟ ಮಾಡುವ ಮೂಲಕ ಶ್ರೀಮಂತಳಾಗುವ ಕನಸು ಕಂಡಿದ್ದ ಮಹಿಳೆಯೊಬ್ಬಳು ಮದ್ಯವರ್ತಿಗಳಿಂದ ಮೋಸ ಹೋದ ಬಳಿಕ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯದ ಮಳವಳ್ಳಿ ಪಟ್ಟಣದ ಗಂಗಾಮತ ಬೀದಿಯ ನಿವಾಸಿ ವೆಂಕಟಮ್ಮ (48) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಮಹಿಳೆಯಾಗಿದ್ದಾರೆ.ಮಲ್ಲಯ್ಯ ಎನ್ನುವವರ ಪತ್ನಿಯಾಗಿದ್ದ ಈಕೆ ಪಟ್ಟಣದಲ್ಲಿ ಸೊಪ್ಪು ಮಾರಿ ಜೀವನ ಸಾಗಿಸುತ್ತಿದ್ದರು.
ಸೊಪ್ಪು ಮಾರಿಕೊಂಡೇ ಜೀವನ ನಡೆಸುವುದು ಕಷ್ಟ, ತಾನು ಶ್ರೀಮಂತಳಾಗಬೇಕೆಂಬ ಆಸೆ ಮೃತ ವೆಂಕಟಮ್ಮ ಮನಸ್ಸಿನಲ್ಲಿ ಹುಟ್ಟಿತ್ತು. ಅದೇ ವೇಳೆ ಬೀದಿಯಲ್ಲಿದ್ದ ಇನ್ನೊಬ್ಬ ಮಹಿಳೆ ತಾರಾ ಎಂಬಾಕೆಯ ಪರಿಚಯವಾಗಿತ್ತು. ಆಕೆ ವೆಂಕಟಮ್ಮ ನಿಗೆ "ನಿನ್ನ ಕಿಡ್ನಿ ಮಾರಾಟ ಮಾಡಿದರೆ ದೊಡ್ಡ ಮೊತ್ತದ ಹಣ ಸಿಗತ್ತೆ, ನೀನು ಕಷ್ಟಗಳೈಂದ ಮುಕ್ತಳಾಗುತ್ತೀ" ಎಂದು ಆಸೆ ಹುಟ್ಟಿಸಿದ್ದಾಳೆ. ಇಷ್ಟೇ ಅಲ್ಲ ಕಿಡ್ನಿ ಮಾರಾಟ ಮಾಡಿದ್ದಾದರೆ 30 ಲಕ್ಷ ಸಿಗತ್ತೆ, ನನಗೆ 3 ಲಕ್ಷ ಕಮೀಷನ್ ಕೊಡಬೇಕು ಎಂದೂ ಒಪ್ಪಂದ ಮಾಡಿಕೊಂಡಿದ್ದಾಳೆ.
ಇದಕ್ಕೆ ವೆಂಕಟಮ್ಮ ಒಪ್ಪಿದ್ದಾಳೆ. ತಕ್ಷಣ ತಾರಾ ಇನ್ನೊಂದು ಆಟ ಹೂಡಿದ್ದು ಈಗಲೇ ಮುಂಗಡವಾಗಿ 2 ಲಕ್ಷ ನೀಡುವಂತೆ ಕೇಳಿದ್ದು ಆಕೆ ಸಾಲ ಸೋಲ ಮಾಡಿ ಹಣ ಹೊಂಚಿಸಿ ನೀಡಿದ್ದಳೆನ್ನಲಾಗಿದೆ.
ಆದರೆ ವಂಚಕಿ ತಾರಾ ಹಣ ಪಡೆದ ಬಳಿಕ ಮತ್ತೆ ಕಿಡ್ನಿ ಮಾರಾಟದ ಬಗ್ಗೆ ಬಾಯ್ಬಿಟ್ಟಿಲ್ಲ, ಆಗ ವೆಂಕಟಮ್ಮ ಪುನಃ ತಾರಾ ಬಳಿ ಸಾರಿ ತನ್ನ ಹಣ ಹಿಂತಿರುಗಿಸುವಂತೆ ಕೇಳಿದ್ದಳು. ಆದರೆ ಅದಕ್ಕೆ ತಾರಾ ಒಪ್ಪಿರಲಿಲ್ಲ.
ಈ ಮಧ್ಯೆ ವೆಂಕಟಮ್ಮ ತನ್ನ ಸಂಕಟವನ್ನು ಬೆಂಗಳೂರಿನಲ್ಲಿದ್ದ ತನ್ನ ಸೋದರನ ಬಳಿಯೂ ಹೇಳಿಕೊಂಡಿದ್ದಾರೆ.ಆಗ ಸೋದರ ತಾನು ಸ್ವಲ್ಪ ಹಣ ನೀಡಿ ಆಕೆಗೆ ಸಹಾಯ ಮಾಡಿದ್ದರು. ಆದರೆ ಇದರಿಂದ ಸಹ ಸಮಾಧಾನವಾಗದೆ ಹೋದಾಗ ಎರಡು ದಿನಗಳ ಹಿಂದೆ ಆಕೆ ಮಳವಳ್ಳಿ ಪಟ್ಟಣ ದೊಡ್ಡಕೆರೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆ ಸಂಬಂಧ ಮಲ್ಲಯ್ಯ ಮಳವಳ್ಳಿ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದ್ದಾಖಲಿಸಿದ್ದು ದೂರು ಸ್ವೀಕರಿಸಿರುವ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos