ಬೆಂಗಳೂರು: ಶುಕ್ರವಾರ ಮುಂಜಾನೆ ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವನನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿಯಾಗಿದ್ದಾರೆ.
ಬೆಂಗಳೂರು ನೆಟ್ಕಲಪ್ಪ ಸರ್ಕಲ್ ನಿವಾಸಿಯಾದ ವೇಣುಗೋಪಾಲ್ (18) ಎಂಬ ಯುವಕ ಮನೆಯಲ್ಲಿ ಪೋಷಕರು ಬೈಉದ ಕಾರಣ ನಮ್ಮ ಮೆಟ್ರೋ ಹಳಿ ಮೇಲೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿಮಾನ್ಸ್ ಗೆ ಆಗಮಿಸಿದ್ದ ಸಿಎಂ ಕುಮಾರಸ್ವಾಮಿ ಯುವಕನ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದ್ದಾರೆ.
ಟೈಲರಿಂಗ್ ಮಾಡಿಕೊಂಡಿದ್ದ ವೇಣುಗೋಪಾಲ್ ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಕಾರಣ ಪೋಷಕರು ಬೈದಿದ್ದರು.ಮೊಬೈಲ್ ಬಿಟ್ಟು ಚೆನ್ನಾಗಿ ಓದು ಎಂದು ಬುದ್ದಿಮಾತು ಹೇಳಿದ್ದಾರೆ. ನಿನ್ನೆ ರಾತ್ರಿ ನಡೆದ ಘಟನೆಯಿಂದ ಬೇಸರಗೊಂಡಿದ್ದ ಆತ ಶುಕ್ರವಾರ ಮುಂಜಾನೆ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿ ರೈಲು ಬರುತ್ತಿದ್ದಂತೆ ಹಳಿ ಮೇಲೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ರೈಲು ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಹಾರಿದ ರಭಸಕ್ಕೆ ಯುವಕನ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು.
"ಹೆತ್ತವರು ಹೇಳುವ ಬುದ್ದಿಮಾತುಗಳನ್ನು ಕೇಳಬೇಕು, ಇದರ ಹಿಂದಿನ ಕಾಳಜಿಯನ್ನು ವಿದ್ಯಾರ್ಥಿಗಳು ಗುರುತಿಸಬೇಕು" ಎಂದು ಸಿಎಂ ಕುಮಾರಸ್ವಾಮಿ ಬುದ್ದಿವಾದ ಹೇಳಿದ್ದಾರೆ.
ಆದರೆ ಯುವಕ ಮುಖ್ಯಮಂತ್ರಿ ಜತೆ ಮಾತನಾಡಿದ್ದು ನಾನು ಸಾಯಲು ಪ್ರಯತ್ನಿಸಲಿಲ್ಲ, ನನಗಾಗ ಏನಾಯಿತೋ ಗೊತ್ತೇ ಆಗಿಲ್ಲ ಎಂದಿದಾನೆ.