ರಾಜ್ಯ

ಇಂದು ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ; ಸಂಜೆ ಗವಿಗಂಗಾಧರೇಶ್ವರಲ್ಲಿ ಸೂರ್ಯರಶ್ಮಿ

Sumana Upadhyaya

ಬೆಂಗಳೂರು: ನಗರದೆಲ್ಲೆಡೆ ಇಂದು ಮುಂಜಾನೆಯಿಂದಲೇ ಸುಗ್ಗಿ ಹಬ್ಬ ಸಂಕ್ರಾಂತಿ ಆಚರಣೆ ಜೋರಾಗಿಯೇ ಸಾಗಿದೆ. ಗ್ರಾಮೀಣ ಭಾಗಗಳಲ್ಲಿ ಜನರು ಗೋವುಗಳಿಗೆ ಕಿಚ್ಚು ಹಾಯಿಸಲು ಸಿದ್ದರಾಗಿದ್ದರೆ. ದೇವಾಲಯಗಳಲ್ಲಿ ಪೂಜೆ ಪುನಸ್ಕಾರ ಬೆಳಗ್ಗೆಯಿಂದಲೇ ಸಾಗಿದೆ. ಹೊಸ ಬಟ್ಟೆ ಧರಿಸಿ ಎಳ್ಳು ಬೆಲ್ಲ ಹಂಚಲು ಮಕ್ಕಳು ಸೇರಿದಂತೆ ಮಹಿಳೆಯರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಹನುಮಂತನಗರದಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ ವಿಗ್ರಹದ ಮೇಲೆ ಸೂರ್ಯ ರಶ್ಮಿ ಬೀಳಲಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ.

ನೆಲಮಟ್ಟಕ್ಕಿಂತ 120 ಅಡಿ ಆಳದಲ್ಲಿರುವ ಗವಿ ಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯನ್ನು ಸಂಜೆ 5.25 ರಿಂದ 5.35ರ ಮಧ್ಯದಲ್ಲಿ ಎರಡು ನಿಮಿಷ ಸೂರ್ಯ ರಶ್ಮಿ ಹಾದು ಹೋಗಲಿದೆ. ಈ ವೇಳೆ ದೇವರಿಗೆ ವಿಶೇಷ ಪೂಜೆಗಳು ನಡೆಯಲಿವೆ. ಇದೇ ರೀತಿ ನಗರದ ಹಲವು ದೇಗುಲಗಳಲ್ಲಿ ಇಂದು ಬೆಳಗ್ಗೆಯಿಂದ ರಾತ್ರಿಯವರೆಗೆ ವಿಶೇಷ ಪೂಜೆ ನೆರವೇರಲಿದೆ.

ಕಳೆದ ವರ್ಷದಿಂದ ಲಾಲ್‌ಬಾಗ್‌ನಲ್ಲಿ ಆಯೋಜಿಸುತ್ತಿರುವ 'ಸುಗ್ಗಿ-ಹುಗ್ಗಿ' ಈ ಬಾರಿಯೂ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತೋಟಗಾರಿಕೆ, ಕೃಷಿ ಇಲಾಖೆ, ಬಿಬಿಎಂಪಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಇಂಗು ಬೆಳಗ್ಗೆ 11 ಗಂಟೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ.

ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆಯೂ ಹೂವು-ಹಣ್ಣು. ತರಕಾರಿಗಳು, ಕಬ್ಬುಗಳ ಮಾರಾಟ ಕಂಡುಬಂತು.

SCROLL FOR NEXT