ತುಮಕೂರು:ಎಂಥಹ ಪರಿಸ್ಥಿತಿಯಲ್ಲೂ ಶಿವಪೂಜೆ, ಧಾರ್ಮಿಕ ಕೈಂಕರ್ಯಗಳನ್ನು ಬಿಡದೇ ಎಂದಿಗೂ ಮಾದರಿಯಾಗಿರುವ ಸಿದ್ಧಗಂಗಾ ಶ್ರೀಮಠದ ಡಾ.ಶಿವಕುಮಾರಸ್ವಾಮಿಗಳವರು ಆಸ್ಪತ್ರೆಯಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯ ನಡುವೆಯೂ ಭಸ್ಮ (ವಿಭೂತಿ) ಧಾರಣೆ ಮಾಡಿದ್ದಾರೆ.
ಅನಾರೋಗ್ಯದ ನಡುವೆಯೂ ಶ್ರೀಗಳು ವಿಭೂತಿ ಧಾರಣೆ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಭಕ್ತಾದಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಶ್ರೀಗಳು ಶೀಘ್ರವೇ ಸಂಪೂರ್ಣ ಗುಣಮುಖರಾಗಲು ಪ್ರಾರ್ಥಿಸುತ್ತಿದ್ದಾರೆ. ಈ ಹಿಂದೆಯೂ ಆಸ್ಪತ್ರೆಗೆ ದಾಖಲಾದಾಗ ಶ್ರೀಗಳಿಗೆ ಅಲ್ಲಿಯೇ ಪೂಜಾ ಕೈಂಕರ್ಯಗಳಿಗೆ ವ್ಯವಸ್ಥೆ ಮಾಡಲಾಗುತ್ತಿತ್ತು. ಅನಾರೋಗ್ಯದ ನಡುವೆಯೂ ಸಹ ಶ್ರೀಗಳು ತಮ್ಮ ಎಂದಿನ ಪೂಜಾ ಕೈಂಕರ್ಯವನ್ನು ನಿರ್ವಹಿಸುತ್ತಿದ್ದರು.