ಬೆಂಗಳೂರು: ಬೆಂಗಳುರಿನಲ್ಲಿ ಬಾಡಿಗೆಗೆ ಮನೆ ಪಡೆಯುವುದಕ್ಕೆ ನಾನಾ ಮಾರ್ಗಗಳಿವೆ. ಆದರೆ ಇಲ್ಲೊಬ್ಬ ವ್ಯಕ್ತಿ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕೋಣೆಯನ್ನೇ ಬಾಡಿಗೆಗೆ ಕೊಡಿ ಎಂದು ವಿಧಾನಸಭೆ ಸಭಾಪತಿ ರಮೇಶ್ ಕುಮಾರ್ ಅವರ ಮುಂದೆ ಬೇಡಿಕೆ ಇಟ್ಟಿದ್ದಾನೆ. ಶಾಸಕರೆಲ್ಲಾ ಆಪರೇಷನ್ ಕಮಲಕ್ಕೆ ಅಂಜಿ ರೆಸಾರ್ಟ್ ರಾಜಕೀಯ ನಡೆಸುತ್ತಿದ್ದಾರೆ. ಹಾಗಾಗಿ ವಿಧಾನಸೌಧದಲ್ಲಿನ ಮುಖ್ಯಮಂತ್ರಿಗಳ ಕೋಣೆಯನ್ನು ಬಾಡಿಗೆಗೆ ಬಿಡಿ ಎಂದು ಅವನು ಸ್ಪೀಕರ್ ಬಳಿ ಮನವಿ ಮಾಡಿದ್ದಾನೆ.
ಶೇಶಾದ್ರಿಪುರಂ ನಲ್ಲಿ ಸಣ್ಣ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಬಿಎಸ್ ಗೌಡ (38) ಈ ಮನವಿ ಸಲ್ಲಿಸಿದ್ದಾರೆ. ಈ ಸಂಬಧ ಸಭಾಪತಿ ರಮೇಶ್ ಕುಮಾರ ಅವರಿಗೆ ಪತ್ರ ಬರೆದಿರುವ ಗೌಡ "ವಿಧಾನಸೌಧದ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರ ಕೊಠಡಿಗಳು ಸೇರಿ ಅನೇಕ ಕೊಠಡಿಗಳು ಹಲವು ದಿನಗಳಿಂದ ಬೀಗ ಹಾಕಿರುವುದನ್ನು ನಾನು ಗಮನಿಸಿದ್ದೇನೆ. ನನಗೆ ಕೋಣೆಗಳ ಅಗತ್ಯವಿದೆ. ನೀವೇನಾದರೂ (ಸಭಾಪತಿ) ಈ ಕೋಣೆಗಳನ್ನು ನನಗೆ ಬಾಡಿಗೆಗೆ ನೀಡಿದ್ದಾದರೆ ನಾನು ನಿಮಗೆ ಕೃತಜ್ಞನಾಗಿರುತ್ತೇನೆ. ಅಲ್ಲದೆ ನಾನು ಇದಕ್ಕಾಗಿ ಬಾಡಿಗೆ ಹಾಗೂ ಮುಂಗಡ ಹಣ ಪಾವತಿ ಮಾಡಲೂ ಸಿದ್ದನಿದ್ದೇನೆ. ಶಾಸಕರು ಇದನ್ನು ಬಳಸದೆ ಉಳಿದಿರುವುದಕ್ಕಿಂತ ನನಗೆ ನೀಡುವುದು ಒಳಿತು.ಹಾಗೆಯೇ ನನಗೆ ನೀಡುವ ಕೋಣೆಗಳ ಬಾಡಿಗೆ ಹಣವನ್ನು ನೀವು ರೈತರ ಸಾಲದ ಮನ್ನಾಗಾಗಿ ಇದನ್ನು ಬಳಸಬಹುದು." ಎಂದು ವಿವರಿಸಿದ್ದಾರೆ.
ಪತ್ರಿಕೆಯೊಡನೆ ಮಾತನಾಡಿದ ಗೌಡ ತಾನು ಪ್ರತಿ ವಾರವೂ ವಿಧಾನಸೌಧಕ್ಕೆ ಭೇಟಿ ನೀಡುತ್ತೇನೆ ಎಂದರು. "ನಾನು ಝಲವು ದಿನಗಳಿಂದ ಈ ಕೋಣೆಗಳು ಲಾಕ್ ಆಗಿರುವುದನ್ನು ಗಮನಿಸಿದ್ದೇನೆ. ನಾವು ಇವರನ್ನು ಚುನಾಯಿಸಿದ್ದೇವೆ. ಇವರು ಸಾರ್ವಜನಿಕರ ಕ್ಷೇಮಕ್ಕಾಗಿ ಕೆಲಸ ಮಾಡಬೇಕು. ಆದರೆ ಅವರು ಸಾರ್ವಜನಿಕರ ಒಳಿತಿಗಾಗಿ ಕೆಲಸ ಮಾಡುವವರಂತೆ ಕಾಣುತ್ತಿಲ್ಲ. ಅವರಿಗೆ ಈ ಕೋಣೆಗಳ ಅಗತ್ಯವೂ ಇಲ್ಲ.ಹಾಗಾಗಿ ಇಂತಹಾ ಕೋಣೆಗಳನ್ನು ಬಾಡಿಗೆಗೆ ನೀಡಿದ್ದಾದರೆ ಇದರಿಂದ ಆದಾಯ ಬರಲಿದೆ. ಆ ಹಣವನ್ನು ರೈತರ ಸಾಲಮನ್ನಾಗೆ ಬಳಸಬಹುದು." ಅವರು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಕೊಠಡಿಗೆ 10,000, ಉಳಿದ ಸಚಿವರು, ಶಾಸಕರ ಕೊಠಡಿಗಳಿಗೆ ತಲಾ 5,000 ರು. ನೀಡಲು ಗೌಡ ತಯಾರಿದ್ದಾರೆ.
ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಲು ಸಭಾಪತಿ ರಮೇಶ್ ಕುಮಾರ ಸಂಪರ್ಕಕ್ಕೆ ಸಿಕ್ಕಲಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos