ರಾಜ್ಯ

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಧ್ವಜಾರೋಹಣ

Srinivasamurthy VN
ಬೆಂಗಳೂರು: 70ನೇ ಗಣರಾಜ್ಯೋತ್ಸವದ ಅಂಗವಾಗಿ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ಧ್ವಜಾರೋಹಣ ನೆರವೇರಿಸಿದರು.
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು ನಡೆದ ಗಣರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆ, ರೈತಗೀತೆಗಳ ಗಾಯನ ನಡೆಯಿತು. ನಂತರ ರಾಜ್ಯಪಾಲರು ತೆರೆದ ವಾಹನದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಕವಾಯತು ವೀಕ್ಷಣೆ ಮಾಡಿದರು. 
ಬಳಿಕ ಹಿಂದಿಯಲ್ಲಿ ಭಾಷಣ ಆರಂಭಿಸಿದ ರಾಜ್ಯಪಾಲರು, ಕರ್ನಾಟಕ ಪ್ರಗತಿಯ ಮಾರ್ಗದಲ್ಲಿ ಇರಲಿದೆ. ಕೊಡಗು, ಮಲೆನಾಡು ಭಾಗದಲ್ಲಿ ಪ್ರಕೃತಿ ವಿಕೋಪವಾಗಿತ್ತು. ಕೊಡಗಿನ ಪ್ರವಾಹದ ವೇಳೆ ಕೇಂದ್ರ, ರಾಜ್ಯಗಳ ಸಂಸ್ಥೆಗಳಿಂದ ತುರ್ತು ಕಾರ್ಯಾಚರಣೆ ನಡೆದಿದೆ. ಕೊಡಗಿನಲ್ಲಿ ಹಾನಿಗೊಳಗಾದವರಿಗೆ ಸ್ಪಂದಿಸಲಾಗಿದೆ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ನಿಯಮಾನುಸಾರ 3,800 ರೂ. ನೀಡಲಾಗಿದೆ ಎಂದು ಹೇಳಿದರು. ಬಡವರ ಬಂಧು ಯೋಜನೆಯ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಕೊಡಲಾಗಿದೆ. ಸಹಕಾರಿ ಬ್ಯಾಂಕ್ ಗಳು, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಯೋಜನೆ ಜಾರಿ ಮಾಡಲಾಗಿದೆ. 20 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಮುಖ್ಯಮಂತ್ರಿಗಳ ಮನೆ ನಿರ್ಮಾಣ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. 
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. 9 ಡಿಸಿಪಿ, 19 ಎಸಿಪಿ ಸೇರಿ 1200 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. ಸುಗಮ ಸಂಚಾರಕ್ಕೆ 3 ಡಿಸಿಪಿಗಳ ನಿಯೋಜನೆ, ಸಾರ್ವಜನಿಕರಿಗೆ ಮೊಬೈಲ್ , ಕ್ಯಾಮರಾ, ಕೈಚೀಲ ನಿಷೇಧ, ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
ಇನ್ನು ಕಾರ್ಯಕ್ರಮಕ್ಕೆ ಹೊರ ರಾಜ್ಯದಿಂದಲೂ ಸಾಕಷ್ಟು ಜನ ಆಗಮಿಸಿದ್ದು, ಹೀಗಾಗಿ ಪೇರೆಡ್ ಅನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರ ಪಾಸ್‍ಗಳನ್ನು ಚೆಕ್ ಮಾಡಿ ಪೊಲೀಸರು ಒಳಗಡೆ ಬಿಟ್ಟಿದ್ದಾರೆ. ಒಟ್ಟಿನಲ್ಲಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ಸೇನೆಯ ವಿವಿಧ ವಿಭಾಗಗಳು, ಸ್ಕೌಟ್ಸ್ ಅಂಡ್ ಗೈಡ್ಸ್ , ಎನ್ ಸಿಸಿ, ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ನಂತರ ವಿವಿಧ ಶಾಲೆಗ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಕಾರ್ಯಕ್ರಮದಲ್ಲಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಗೃಹಸಚಿವ ಎಂ.ಬಿ. ಪಾಟೀಲ್, ವಿರೋಧ ಪಕ್ಷದ ನಾಯಕ ಬಿ.ಎಸ್​. ಯಡಿಯೂರಪ್ಪ ಮತ್ತಿತರ ಗಣ್ಯರು ಭಾಗಿಯಾಗಿದ್ದಾರೆ. 
SCROLL FOR NEXT