ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ.ಕುಮಾರಸ್ವಾಮಿ ಖಾಸಗಿ ಭೇಟಿಗಾಗಿ ಅಮೆರಿಕಾಕ್ಕೆ ಹೋಗಿರಬಹುದು. ಆದರೆ ತಮ್ಮ ಅಧಿಕೃತ ಕೆಲಸಗಳಿಂದ ದೂರವುಳಿದಿಲ್ಲ.
ಮುಖ್ಯಮಂತ್ರಿಯಾದ ನಂತರ ಬಜೆಟ್ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ ಚೀನಾದೊಂದಿಗಿನ ಸ್ಪರ್ಧಾತ್ಮಕತೆ ಯೋಜನೆ ಮೂಲಕ ಆಯ್ದ ಜಿಲ್ಲೆಗಳಲ್ಲಿ ಉತ್ಪಾದನೆ ವಲಯಗಳನ್ನಾಗಿ ಪರಿವರ್ತಿಸಿ ಆ ಮೂಲಕ ಉದ್ಯೋಗ ಸೃಷ್ಟಿಸುವ ಯೋಜನೆಯಲ್ಲಿದ್ದಾರೆ.
ಇದಕ್ಕಾಗಿ ಅಮೆರಿಕಾದ ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ ನಲ್ಲಿ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಬಂಡವಾಳಗಾರರ ಜೊತೆ ಸಭೆ ನಡೆಸಲಿದ್ದಾರೆ. ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಘೋಷಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ನಾನು ಕರ್ನಾಟಕದಲ್ಲಿ ಉದ್ಯಮಗಳ ಅವಕಾಶಗಳ ಕುರಿತು ಚೀನಾ ಹೂಡಿಕೆದಾರರ ಜೊತೆ ಸ್ಪರ್ಧೆಯೊಡ್ಡುವ ಸಭೆಯಲ್ಲಿ ಭಾಗವಹಿಸಲಿದ್ದೇನೆ. ಇದನ್ನು ನಾಳೆ ಮತ್ತು ನಾಡಿದ್ದು 4ರಂದು ವಾಷಿಂಗ್ಟನ್ ಡಿಸಿ ಮತ್ತು ನ್ಯೂಯಾರ್ಕ್ ಗಳಲ್ಲಿ ಕನ್ನಡಿಗರು ಆಯೋಜನೆ ಮಾಡಿದ್ದಾರೆ. ರಾಜ್ಯದಲ್ಲಿ ಹೂಡಿಕೆ ಮಾಡುವ ಹೆಚ್ಚು ಹೆಚ್ಚು ಅವಕಾಶಗಳನ್ನು ತೆರೆಯಲು, ಅದರಲ್ಲೂ ಎರಡು ಮತ್ತು ಮೂರನೇ ದರ್ಜೆಯ ನಗರಗಳಲ್ಲಿ ಹೂಡಿಕೆ ಮಾಡಲು ಸರ್ಕಾರ ಉತ್ಸುಕವಾಗಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಈ ನಡೆಗೆ ಪ್ರಶಂಸೆ ವ್ಯಕ್ತವಾದರೆ ಇನ್ನೊಂದೆಡೆ ಟ್ವೀಟ್ ನಲ್ಲಿ ಆಗಿರುವ ಟೈಪಿಂಗ್ ತಪ್ಪುಗಳನ್ನು ಟ್ರೋಲ್ ಮಾಡಲಾಗುತ್ತಿದೆ. ಆರಂಭದಲ್ಲಿ ಜೂನ್ 2 ಮತ್ತು 4 ಎಂದು ಬರೆಯಲಾಗಿತ್ತು. ಆ ಬಳಿಕ ಆಗಿರುವ ಪ್ರಮಾದ ಕಂಡು ಜುಲೈ 2 ಮತ್ತು 4 ತಿದ್ದಲಾಯಿತು.