ಕಾರವಾರ: ರೆಸಾರ್ಟ್ ನಲ್ಲಿದ್ದ ಈಜುಕೊಳದಲ್ಲಿ ಮುಳುಗಿ ಒಂಬತ್ತು ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ದುರಂತ ಘಟನೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡದ ಶಿಂಗನಹಳ್ಳಿ ಗ್ರಾಮದ ರೆಸಾರ್ಟ್ ನಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ನಡೆದ ಘಟನೆ ಸೋಮವಾರ ಬೆಳಕು ಕಂಡಿದ್ದು ರೆಸಾರ್ಟ್ ಮ್ಯಾನೇಜ್ಮೆಂಟ್ ಮತ್ತು ಬಾಲಕನ ಕುಟುಂಬ ಸದಸ್ಯರ ನಿರ್ಲಕ್ಷದ ವಿರುದ್ಧ ಪೋಲೀಸ್ ದೂರು ದಾಖಲಾಗಿದೆ.
ಹುಬ್ಬಳ್ಳಿಯ ಅಕ್ಕಿಹೊಂಡ ಪ್ರದೇಶದ ಪೊಇಂಜಾರ ಓಣಿ ನಿವಾಸಿ ಶ್ರೀಧರ್ ಶೀಲವಂತರ್ ( (9) ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈತ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದು ಸೋಮವಾರ ಆಸ್ಪತ್ರೆ ಅಧಿಕಾರಿಗಳು ಶವವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.
ಬಾಲಕನು ಭಾನುವಾರದಂದು ವಾರಾಂತ್ಯವನ್ನು ಕಳೆಯುವ ಸಲುವಾಗಿ ಆತನ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಇಬ್ಬರು ಸೋದರಸಂಬಂಧಿಗಳೊಂದಿಗೆ ರೆಸಾರ್ಟ್ಗೆ ಆಗಮಿಸಿದ್ದ, ಕೆಲ ಸಮಯ ಆಟವಾಡಿದ ನಂತರ ಆತ ಕಾಟೇಜ್ ನಲ್ಲಿ ಊಟ ಮಾಡಿದ್ದನು. ಇದಾಗಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಲಕ ಈಜುಕೊಳಕ್ಕೆ ಹಾರಿದ್ದಾನೆ. ಆತನಿಗೆ ಈಜು ಬರುತ್ತಿರಲಿಲ್ಲ. ಆ ವೇಳೆ ಈಜುಕೊಳದ ಸಮೀಪ ಸೆಕ್ಯುರಿಟಿ ಗಾರ್ಡ್ ಸೇರಿದಂತೆ ಯಾರೊಬ್ಬರೂ ಇರಲಿಲ್ಲ. ಕೆಲ ನಿಮಿಷದ ನಂತರ ಬಾಲಕನ ಸಂಬಂಧಿಯೊಬ್ಬ ಹೊರಬಂದಿದ್ದು ಬಾಲಕನನ್ನು ನೀರಿನಿಂದ ಮೇಲೆತ್ತಿ ತಕ್ಷಣ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾನೆ.
ಬಾಲಕನ ಸಾವಿಗೆ ರೆಸಾರ್ಟ್ ಮಾಲೀಕರು ಹಾಗೂ ಬಾಲಕನ ಸಂಬಂಧಿಗಳ ನಿರ್ಲಕ್ಷವೇ ಕಾರಣವೆಂದು ಪೋಲೀಸರು ಹೇಳಿದ್ದಾರೆ.ಅವಘಡ ನಡೆದ ವೇಳೆ ಬಾಲಕನೊಬ್ಬನೇ ಹೊರಗೆ ಆಟವಾಡುತ್ತಿದ್ದ. ಈಜುಕೊಳದ ಸಮೀಪ ಇದ್ದ ಕಾವಲುಗಾರ ಸಹ ಊಟಕ್ಕೆ ತೆರಳಿದ್ದ. ಹಾಗಾಗಿ ಬಾಲಕನು ನೀರಿಗೆ ಬಿದ್ದಾಗ ಯಾರೊಬ್ಬರೂ ಗಮನಿಸಿಲ್ಲ.ವಿಪರ್ಯಾಸವೆಂದರೆ, ರೆಸಾರ್ಟ್ ಸುತ್ತಮುತ್ತ ಯಾವುದೇ ಮುಳುಗು ತಜ್ಞರಾಗಲಿ, ಈಜು ಪರಿಣಿತರಾಗಲಿ ಇಲ್ಲ ಎಂದು ಪೋಲೀಸರು ಹೇಳಿದ್ದಾರೆ.