ಉಡುಪಿ: ಮುಸುಕು ಹಾಕಿಕೊಂಡು ಬಂದ ವ್ಯಕ್ತಿಯೊಬ್ಬ ಮನೆಯಲ್ಲಿ ಮಲಗಿದ್ದ 1 ವರ್ಷದ ಮಗುವನ್ನು ಎತ್ತಿಕೊಂಡು ಪರಾರಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಎಡಮೊಗ್ಗೆ ಗ್ರಾಮದ ಕುಮಟಿ ಬೇರು ಎಂಬಲ್ಲಿಂದ ವರದಿಯಾಗಿದೆ.
ಗುರುವಾರ ಬೆಳಗ್ಗೆ ಮನೆಗೆ ನುಗ್ಗಿದ ಆಗಂತುಕ ಸಾನ್ವಿತಾ ನಾಯಕ್ ಎಂಬ 1 ವರ್ಷದ ಮಗುವನ್ನು ಕಿಡ್ನಾಪ್ ಮಾಡಿಕೊಂಡು ಪರಾರಿಯಾಗಿದ್ದಾನೆ, ಕುಬ್ಜಾ ನದಿಯ ಮೂಲಕ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ ಎಂದು ಮಗುವಿನ ತಾಯಿ ರೇಖಾ ಆರೋಪಿಸಿದ್ದಾರೆ.
ಮನೆಯಲ್ಲಿ ಹೆಜ್ಜೆ ಸಪ್ಪಳ ಕೇಳಿ ಎಚ್ಚರಗೊಂಡೆ, ಒಳಗೆ ಬಂದವನೇ ಮಗುವನ್ನು ಎತ್ತಿಕೊಂಡ. ಆ ವೇಳೆ ನಾನು ಪ್ರತಿಭಟಿಸಿದೆ, ಆದರೆ ಆತ ಮಗುವನ್ನು ಕಿಡ್ನಾಪ್ ಮಾಡಿಕೊಂಡು ಹೋಗಿಬಿಟ್ಟ. ಬಹು ದೂರದವರೆಗೆ ಆತನನ್ನು ನನ್ನ ಐದು ವರ್ಷಗ ಮಗನ ಜೊತೆ ಹಿಂಬಾಲಿಸಿದೆ, ಆದರೆ ಆತ ಕುಬ್ಜಾ ನದಿಯ ನದಿಗೆ ಜಿಗಿದ, ನಾನು ಕೂಡ ನದಿಗೆ ಹಾರಿದೆ. ಆದರೆ ನೀರಿನ ಹರಿವಿನ ಪ್ರಮಾಣ ಹೆಚ್ಚು ಇದ್ದ ಕಾರಣ ಆತನನ್ನು ಹಿಡಿಯಲಾಗಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಬಂದ ಆಗಂತುಕ ಏಕೆ ತಮ್ಮ 1 ವರ್ಷದ ಮಗುವನ್ನು ಟಾರ್ಗೆಟ್ ಮಾಡಿದ್ದಾನೆ ಎಂಬುದು ಪೋಷಕರಿಗೆ ಇನ್ನೂ ನಿಗೂಡವಾಗಿದೆ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ.