ಬೆಂಗಳೂರು; ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳನ್ನು ತ್ವರಿತವಾಗಿಸಲು ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಸೂಕ್ತ ಕ್ರಮ ಕೈಗೊಳ್ಳುವಂತೆ ಇತ್ತೀಚೆಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿನ ವಿವಿಧ ರೈಲ್ವೆ ಯೋಜನೆಗಳ ಕಾರ್ಯ ವಿಳಂಬಕ್ಕೆ ಭೂ ಒತ್ತುವರಿ ಸಮಸ್ಯೆ ಮತ್ತು ಅರಣ್ಯ, ಪರಿಸರ ಇಲಾಖೆಯಿಂದ ಅನುಮತಿ ಪಡೆಯಲು ವಿಳಂಬವಾಗಿರುವುದು ಕಾರಣ ಎಂದು ವಿಶ್ಲೇಷಿಸಲಾಗಿದೆ.
ಹೊಸ ರೈಲ್ವೆ ಮಾರ್ಗ, ಗೇಜ್ ಪರಿವರ್ತನೆ ಮತ್ತು ದ್ವಿಗುಣಗೊಳಿಸುವ ಕೆಲಸ ಮೂಲಭೂತ ಸೌಕರ್ಯ ಯೋಜನೆಗಳಲ್ಲಿ ಮುಖ್ಯವಾಗಿದ್ದು ವಿದ್ಯುದ್ದೀಕರಣಕ್ಕೆ ಪ್ರಸರಣ ಮಾರ್ಗದ ಕಾರ್ಯನಿರ್ವಹಣೆ ಕೂಡ ಸೇರಿಕೊಂಡಿದೆ.
ಹಲವು ಕಾರಣಗಳಿಂದ ರಾಜ್ಯದಲ್ಲಿನ 17 ವಿವಿಧ ರೈಲ್ವೆ ಯೋಜನೆಗಳ ಕಾಮಗಾರಿ ವಿಳಂಬವಾಗಿದೆ, ಕರ್ನಾಟಕ ಸರ್ಕಾರದ ಜೊತೆ ಸೇರಿಕೊಂಡು ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗಿದ್ದು ರಾಜ್ಯ ಸರ್ಕಾರ 2018-19ನೇ ಸಾಲಿಗೆ 510.9 ಕೋಟಿ ರೂಪಾಯಿ ಮತ್ತು 2019-20ನೇ ಸಾಲಿಗೆ ಇನ್ನಷ್ಟು ಹಣವನ್ನು ಮೀಸಲಿಡಬೇಕಿದೆ.
ಈ ವಿಷಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೈರುತ್ಯ ರೈಲ್ವೆ ಇಲಾಖೆಯ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಕಳೆದ 9ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಅವರಿಗೆ ಪತ್ರ ಬರೆದು ರಾಜ್ಯದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿ ಇಂದಿನ ಸ್ಥಿತಿಗತಿ ಮತ್ತು ಇಲಾಖೆಗಳಿಂದ ಶೀಘ್ರ ಅನುಮತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಈ ತಿಂಗಳ ಅಂತ್ಯದೊಳಗೆ ರೈಲ್ವೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸಲು ಸಮಯ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos