ಶಿರಸಿ: ಭಾರಿ ಮಳೆ ಗಾಳಿಯಿಂದಾಗಿ ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಅರಣ್ಯ ರಕ್ಷಕನೋರ್ವ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮಾವಿನಗುಂಡಿ ರಸ್ತೆಯ ಕುಳಿಬಿಡು ಬಳಿ ನಡೆದಿದೆ.
ಅರಣ್ಯ ರಕ್ಷಕ ಶಶಿಧರ್ (58) ಮೃತ ದುರ್ದೈವಿ. ಕರ್ತವ್ಯಕ್ಕೆ ಹಾಜರಾಗಲು ರಸ್ತೆಯಲ್ಲಿ ಸಾಗುತ್ತಿದ್ದಾಗ ಬೃಹತ್ ಗಾತ್ರದ ಮರವೊಂದು ದ್ವಿಚಕ್ರ ವಾಹನದ ಮೇಲೆ ಬಿದ್ದ ಪರಿಣಾಮ ಮರದಡಿ ಸಿಲುಕಿ ಅವರು ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರೀ ಗಾಳಿ, ಮಳೆ ಹಿನ್ನೆಲೆ ಶಾಲೆ-ಕಾಲೇಜಿಗೆ ರಜೆ
ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರವೂ ಭಾರಿ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಭಾರಿ ಮಳೆಯಾಗುತ್ತಿರುವುದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸುವಂತೆ ಕಾರವಾರ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ, ಶೈಕ್ಷಣಿಕ ಇಲಾಖೆಯ ಉಪನಿರ್ದೇಶಕ ಮಂಜುನಾಥ ಅವರಿಗೆ ಸೂಚಿಸಿದ್ದಾರೆ.
ಸರಕಾರಿ,ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಒಂದು ದಿನ ರಜೆ ನೀಡಲಾಗಿದೆ. ಇಂದಿನ ರದ್ದಾದ ತರಗತಿಗಳನ್ನು ಮುಂದಿನ ಭಾನುವಾರ ಏರ್ಪಡಿಸಿ ಸರಿದೂಗಿಸಲು ಅವರು ಸೂಚಿಸಿದ್ದಾರೆ.
ಪ್ರಕೃತಿ ವಿಕೋಪ ಸಂಬಂಧ ಸಮಸ್ಯೆಯಾದರೆ, ಸಾರ್ವಜನಿಕರು ಸಹಾಯವಾಣಿ- 0827221077, ಮೊ.8550001077 ಗೆ ಸಂಪರ್ಕಿಸಬಹುದು.