ಬೆಂಗಳೂರು: ಅತೃಪ್ತ ಶಾಸಕರ ರಾಜಿನಾಮೆ ಬಳಿಕ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟಿದೆಯಾದರೂ ನೂತನ ಸರ್ಕಾರಕ್ಕೂ ತಲೆನೋವು ತಪ್ಪಿಲ್ಲ.
ಹೌದು.. ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿರುವ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಹಾಗೂ ಬಿಜೆಪಿಯಿಂದ ನೂತನ ಸರ್ಕಾರ ರಚನೆ ಎರಡೂ ವಿಧಾನ ಸಭೆ ಸ್ಪೀಕರ್ ರಮೇಶ್ ಕುಮಾರ್ ಅವರು ಕೈಗೊಳ್ಳುವ ತೀರ್ಮಾನದ ಮೇಲೆ ನಿಂತಿದೆ.
ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಪಕ್ಷದ ವಿಪ್ ಉಲ್ಲಂಘಿಸಿದ ಶಾಸಕರನ್ನು ಅನರ್ಹಗೊಳಿಸುವಂತೆ ಈಗಾಗಲೇ ಸ್ವೀಕರ್ ಗೆ ದೂರು ನೀಡಿದ್ದಾರೆ. ಆದಷ್ಟು ಶೀಘ್ರದಲ್ಲಿ ಶಾಸಕರ ರಾಜೀನಾಮೆ ಅಂಗೀಕರಿಸದೆ ಅನರ್ಹಗೊಳಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಮೇಲೆ ಒತ್ತಡ ಹೇರಿದ್ದಾರೆ. ರಾಜೀನಾಮೆ ನೀಡಿದ ಶಾಸಕರ ಅರ್ಜಿಗಳ ವಿಚಾರಣೆ ನಡೆಸಿದ ಸ್ಪೀಕರ್ ಅವರು ಮಂಗಳವಾರ ತೀರ್ಪನ್ನು ಕಾಯ್ದಿರಿಸಿದ್ದಾರೆ.
ಅಂತೆಯೇ 14 ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುವ ಸಾಧ್ಯತೆ ಇದ್ದು, ಮೂವರು ಶಾಸಕರನ್ನು ಅನರ್ಹಗೊಳಿಸಲಿದ್ದಾರೆಂಬ ಮಾಹಿತಿ ಇದೆ.
ಇನ್ನು ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು, ದೋಸ್ತಿ ನಾಯಕರನ್ನು ಉದ್ದೇಶಿಸಿ, 'ನೀವು ನಿರೀಕ್ಷೆ ಮಾಡುವ ಆದೇಶ ಕೊಡಲು ಸಾಧ್ಯವಿಲ್ಲ. ಆದರೆ, ವಿಪ್ ಉಲ್ಲಂಘಿಸಿದವರ ವಿರುದ್ಧ ನೀವು ದೂರು ನೀಡಿದರೆ ನಾನು ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇನೆ ಎಂದು ಹೇಳುವ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿದ್ದರು. ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್ ಅವರು ಕೈಗೊಳ್ಳುವ ತೀರ್ಪು ಕೇವಲ ಅತೃಪ್ತರ ಪಾಲಿಗೆ ಮಾತ್ರವಲ್ಲ ಸರ್ಕಾರ ರಚನೆ ಮಾಡಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ಪಕ್ಷಕ್ಕೂ ನಿರ್ಣಾಯವಾಗಲಿದೆ.
ಅಲ್ಲದೆ ಒಂದು ವೇಳೆ ಹಾಲಿ ಸಂಖ್ಯಾ ಬಲದ ಮೇಲೆ ಬಿಎಸ್ ವೈ ಸರ್ಕಾರ ರಚನೆ ಮಾಡಿದರೂ, ವಿಶ್ವಾಸಮತದ ವೇಳೆ ರೆಬೆಲ್ ನಾಯಕ ವಿರುದ್ಧ ಸ್ಪೀಕರ್ ಕೈಗೊಳ್ಳುವ ನಿರ್ಧಾರ ಕೂಡ ನಿರ್ಣಾಯಕವಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos