ಮಂಡ್ಯ: ಮುಖ್ಯಮಂತ್ರಿಯಾದ ನಂತರ ಬಿ ಎಸ್ ಯಡಿಯೂರಪ್ಪ ಅವರು ಮೊದಲ ಬಾರಿಗೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಗವಿಮಠದ ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಾಲ್ಕನೇ ಬಾರಿ ನಿನ್ನೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಇದು ಅವರ ಮೊದಲ ತವರಿನ ಭೇಟಿಯಾಗಿದೆ.
ಊರಿನ ಜನರು ನೂತನ ಮುಖ್ಯಮಂತ್ರಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೂಕನಕೆರೆಯನ್ನು ಅಭಿವೃದ್ಧಿಮಾಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದರು.
ರಾಜ್ಯದ ಅಭಿವೃದ್ಧಿ, ರೈತಾಪಿ ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವುದೇ ತಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ತೂಬಿನಕೆರೆ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರಿಗೆ ಹೇಳಿದರು.
ಬಳಿಕ ಅಲ್ಲಿಂದ ಮೇಲುಕೋಟೆ ಚಲುವರಾಯಸ್ವಾಮಿ ದೇವಾಲಯಕ್ಕೆ ಭೇಟಿ ಕೊಡುವುದಾಗಿ ಅವರು ಹೇಳಿದರು. ಹುಟ್ಟೂರಿಗೆ ಭೇಟಿ ನೀಡುತ್ತಿರುವುದು ಸಂತಸದ ವಿಷಯ ಎಂದರು.
ಮಂಡ್ಯ ಜಿಲ್ಲೆಯ ಬೂಕನಕರೆಗೆ ಆಗಮಿಸಿದ ರಾಘವೇಂದ್ರ, ಶಾಸಕ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು.
ಈ ಸಮಯದಲ್ಲಿ 300 ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಒಬ್ಬರು ಎಸ್ಪಿ, ಇಬ್ಬರು ಡಿವೈಎಸ್ಪಿ, 5 ಇನ್ಸ್ಪೆಕ್ಟರ್, 15 ಸಬ್ ಇನ್ಸ್ ಪೆಕ್ಟರ್, 2 ಕೆಎಸ್ ಆರ್ಪಿ, 3 ಡಿಎಆರ್ ತುಕಡಿ ಸೇರಿದಂತೆ ಸಂಪೂರ್ಣ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು .
ಕೆ ಆರ್ ಪೇಟೆಯ ಬೂಕನಕೆರೆಯ ಹೆಲಿಪ್ಯಾಡ್ನಲ್ಲಿ ಅವರು ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು, ಆದರೆ ಈ ಸಮಯದಲ್ಲಿ ಜೆಡಿಎಸ್ ಯಾವುದೇ ಶಾಸಕರು ಹಾಜರಿರಲಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos