ಚಿಂತಾಮಣಿ: ಕುಡಿದ ಮತ್ತಿನಲ್ಲಿ ಅನಾರೋಗ್ಯಕ್ಕೀಡಾಗಿದ್ದ ವೃದ್ದ ತಾಯಿಗೆ ಬೆಂಕಿ ಇಟ್ಟು ಕೊಂದ ಮಗನೊಬ್ಬ ಕಡೆಗೆ ತಾನೂ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಲಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕಿನ ಮಾಡಿಕೆರೆ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ವೆಂಕಟಮ್ಮ ( 90 ) ಮತ್ತು ಮಗ ಜಯರಾಮಪ್ಪ ( 55 ) ಸಾವಿಗೀಡಾಗಿದ್ದಾರೆ.
ಹಲವು ವರ್ಷಗಳಿಂದ ಗ್ರಾಮದಲ್ಲಿ ವಾಸವಿದ್ದ ವೆಂಕಟಮ್ಮ ಅವರ ಕುಟುಂಬ ಕೂಲಿ ಮಾಡಿ ಜೀವನ ಸಾಗಿಸುತ್ತಿತ್ತು. ಮೃತ ವೆಂಕಟಮ್ಮ ಸುತ್ತಲಿನ ಗ್ರಾಮದಲ್ಲಿ ಸಾವಿರಾರು ಮಂದಿಗೆ ಸೂಲಗಿತ್ತಿಯಾಗಿ ಜತೆಗೆ ಭಯಪೀಡಿತವಾಗುವ ಮಕ್ಕಳಿಗೆ ತಾಯತ ಕಟ್ಟುತ್ತಾ "ದಾದಿ"ಎಂದೇ ಜನಜನಿತರಾಗಿದ್ದರು.
ಆದರೆ ಕಳೆದ ಐದು ವರ್ಷಗಳಿಂದ ಆಕೆಗೆ ಅನಾರೋಗ್ಯ ಕಾಡುತ್ತಿತ್ತು. ಆಗೆಲ್ಲಾ ಮಗ ಜಯ ರಾಮಪ್ಪ ಸಹ ಇಷ್ಟು ದಿನವು ತಾಯಿಯ ಸೇವೆ ಯನ್ನು ಮಾಡಿಕೊಂಡು ಬಂದಿದ್ದು
ಆದರೆ ವಯಸ್ಸಾಗಿದ್ದ ತಾಯಿ ವೆಂಕಟಮ್ಮ ನವರು ಅನಾರೋಗ್ಯಕ್ಕೀಡಾಗಿದ್ದು ದಿನವೂ ನರಳಾಡುತ್ತಾ ಬದುಕಿದ್ದನ್ನು ಕಾಣಲಾಗದೆ ಮಗ ಜಯರಾಮಪ್ಪ ಬೇಸತ್ತಿದ್ದನು. ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮನೆಯ ಬಚ್ಚಲಿಗೆ ತಾಯಿಯನ್ನು ಕರೆದೊಯ್ದ ಜಯರಾಮಪ್ಪ ಆಕೆಗೆ ಬೆಂಕಿ ಹಚ್ಚಿದ್ದಾನೆ. ಮೊದಲಿನಿಂದ ಅನಾರೋಗ್ಯಕ್ಕೆ ಈಡಾಗಿದ್ದ ತಾಯಿ ಅಲ್ಲಿಂದ ಹೊರಬರಲಾಗದೆ ಅಲ್ಲೇ ಸುಟ್ಟು ಕರಕಲಾಗಿ ಮೃತಪಟ್ಟಿದ್ದಾರೆ. ಆದರೆ ತಾಯಿ ಶವವನ್ನು ಕಂಡಾಗ ಮದ್ಯವ್ಯಸನಿ ಮಗನಿಗೆ ತಿಳಿವು ಮೂಡಿದ್ದು ತಾನೂ ಮನೆಯ ಇನ್ನೊಂದು ಕೋಣೆಗೆ ತೆರಳಿ ಅಲ್ಲಿ ನೇಣಿಗೆ ಶರಣಾಗಿದ್ದಾನೆ.
ಘಟನೆ ಕುರಿತು ಮಾಹಿತಿ ಪಡೆದ ಗ್ರಾಮಾಂತರ ಪೋಲಿಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.