ರಾಜ್ಯ

ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಅಭ್ಯರ್ಥಿ

Srinivasamurthy VN
ಬೆಂಗಳೂರು: ಅಚ್ಚರಿ ಬೆಳವಣಿಗೆಯಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಹುದ್ದೆಗೆ ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಯಾಗಿ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ.
ಬುಧವಾರ ನಡೆಯಲಿರುವ ಕರ್ನಾಟಕ ವಿಧಾನಸಭಾ ಸ್ಪೀಕರ್ ಹುದ್ದೆಯ ಚುನಾವಣೆಗೆ ಮಾಜಿ ಸಚಿವ  ಶಿರಸಿ ವಿಧಾನಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ತನ್ನ ಅಭ್ಯರ್ಥಿಯೆಂದು ಆಡಳಿತಾರೂಢ ಬಿಜೆಪಿ ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಈ ಹುದ್ದೆಯನ್ನು ಆಲಂಕರಿಸಲು ಮಾಜಿ ಸ್ಪೀಕರ್ ಕೆ.ಜೆ. ಬೋಪಯ್ಯ ಆಸಕ್ತಿ ತೋರದ ಕಾರಣ, ಕಾಗೇರಿ ಅವರ ಹೆಸರನ್ನು ರಾಜ್ಯ ಬಿಜೆಪಿ ನಾಯಕರು ಆಖೈರು ಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭೆಯ ಹಾಲಿ ಸ್ಪೀಕರ್  ಕೆ.ಆರ್. ರಮೇಶ್ ಕುಮಾರ್  ಸೋಮವಾರ   ತಮ್ಮ ಹುದ್ದೆಗೆ  ರಾಜೀನಾಮೆ ನೀಡಿರುವ ಕಾರಣ  ವಿಧಾನಸಭಾ ಸಭಾಧ್ಯಕ್ಷರ ಹುದ್ದೆ  ಖಾಲಿ ಉಳಿದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಶೀಘ್ರದಲ್ಲಿಯೇ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಪ್ರತಿಪಕ್ಷ ಕಾಂಗ್ರೆಸ್ ಸ್ಪೀಕರ್ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ  ಯಾವುದೇ ನಿರ್ಧಾರ ಕೈಗೊಂಡಿಲ್ಲ ಸದ್ಯ 208 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ  106 ಸದಸ್ಯರನ್ನು ಹೊಂದುವ  ಮೂಲಕ  ಬಹುಮತ ಹೊಂದಿದೆ. ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ  ಬಿ.ಎಸ್. ಯಡಿಯೂರಪ್ಪ ಸೋಮವಾರ ವಿಧಾನಸಭೆಯಲ್ಲಿ ತಮ್ಮ ಸರ್ಕಾರಕ್ಕಿರುವ ಬಹುಮತ ಸಾಬೀತು ಪಡಿಸಿದ್ದರು.
SCROLL FOR NEXT