ವಿಜಿ ಸಿದ್ದಾರ್ಥ್(ಸಂಗ್ರಹ ಚಿತ್ರ)
ಬೆಂಗಳೂರು: ಉದ್ಯಮಿ ವಿಜಿ ಸಿದ್ದಾರ್ಥ್ ಅವರ ಸಾವಿಗೆ ಮುನ್ನ ಅವರು ಬರೆದಿಟ್ಟರೆನ್ನಲಾದ ಡೆತ್ ನೋಟ್ ನಲ್ಲಿ ಐಟಿ ಇಲಾಖೆ ಅಧಿಕಾರಿಗಳ ಕಿರುಕುಳ ಪ್ರಸ್ತಾಪ ವಿಷಯ ಭಾರೀ ಸದ್ದು ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಐಟಿ ಇಲಾಖೆ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಕೆಫೆ ಕಾಫಿ ಡೇ ಕಂಪೆನಿಯ ಹಣಕಾಸು ಅಕ್ರಮಕ್ಕೂ ಕಾಂಗ್ರೆಸ್ ನ ಹಿರಿಯ ರಾಜಕಾರಣಿ ಮಧ್ಯೆ ಇರುವ ಸಂಬಂಧ. ಹೀಗಾಗಿ ಇದು ಮುಂದಿನ ದಿನಗಳಲ್ಲಿ ಹಲವು ರಾಜಕೀಯ ತಿರುವು ಪಡೆದುಕೊಂಡರೂ ಆಶ್ಚರ್ಯವಿಲ್ಲ.
ಕೆಫೆ ಕಾಫಿ ಡೇ ಹಣಕಾಸು ಮುಗ್ಗಟ್ಟಿಗೆ ಒಬ್ಬ ಕಾಂಗ್ರೆಸ್ ರಾಜಕಾರಣಿಯನ್ನು ತಳಕು ಹಾಕಲಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ತೀವ್ರ ಕಿರುಕುಳ ಮತ್ತು ಮಾನಸಿಕ ಒತ್ತಡ ಎದುರಾಯಿತು ಎಂದು ಸಿದ್ದಾರ್ಥ್ ಬರೆದಿದ್ದಾರೆ ಎನ್ನಲಾದ ಪತ್ರದ ಕುರಿತು ರಕ್ಷಣಾತ್ಮಕ ಹೇಳಿಕೆ ನೀಡಿರುವ ಐಟಿ ಇಲಾಖೆ ಅಧಿಕಾರಿಗಳು, ವಿವಾದಾತ್ಮಕ ಕಾಂಗ್ರೆಸ್ ನಾಯಕನ ನಿವಾಸದ ಮೇಲೆ ಇಲಾಖೆ ದಾಳಿ ನಡೆಸಿ ದಾಖಲೆಗಳ ಜಾಡು ಹಿಡಿದು ಹೋದಾಗ ನಮಗೆ ಸಿಕ್ಕಿದ್ದು ಸಿಸಿಡಿಯೊಂದಿಗಿನ ಹಣಕಾಸು ವಹಿವಾಟು ಮತ್ತು ಅವ್ಯವಹಾರ. ಈ ನಿಟ್ಟಿನಲ್ಲಿ ಸಿದ್ಧಾರ್ಥ್ ಅವರ ಕಂಪೆನಿಗಳ ಮೇಲೆ ದಾಳಿ ನಡೆಸಲಾಯಿತೆ ಹೊರತು ನೇರವಾಗಿ ಸಿದ್ದಾರ್ಥ್ ಅವರ ಕಂಪೆನಿಗಳು ಮತ್ತು ಸಂಸ್ಥೆ ಮೇಲೆ ಎಂದೂ ದಾಳಿ ಮಾಡಿಲ್ಲ ಎನ್ನುತ್ತಾರೆ.
ತನಿಖೆಯಲ್ಲಿ ಭಾಗಿಯಾದ ಐಟಿ ಇಲಾಖೆಯ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ರಾಜಕೀಯ ನಾಯಕನ ನಿವಾಸ ಮತ್ತು ವ್ಯವಹಾರ ಕೇಂದ್ರಗಳ ಮೇಲೆ ನಮ್ಮ ಸಿಬ್ಬಂದಿ ದಾಳಿ ನಡೆಸಿದಾಗ ವಿ ಜಿ ಸಿದ್ದಾರ್ಥ್ ಅವರ ಜೊತೆಗೆ ನಡೆಸಲಾದ ಹಣಕಾಸು ವಹಿವಾಟುಗಳು ಬೆಳಕಿಗೆ ಬಂದವು. ಸಿದ್ದಾರ್ಥ್ ಇಲಾಖೆಗೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಈ ಹಣಕಾಸು ವಹಿವಾಟು ಬಗ್ಗೆ ಲೆಕ್ಕ ತೋರಿಸಿರಲಿಲ್ಲ. ಇದರಿಂದ ಅವರು ರಾಜಕೀಯ ನಾಯಕನ ಜೊತೆ ನಡೆಸಿದ ರಹಸ್ಯ ಮತ್ತು ಅನ್ಯಮಾರ್ಗಗಳ ವ್ಯವಹಾರಗಳ ಕುರಿತು ನಾವು ಪರಿಶೀಲನೆ ನಡೆಸಿದೆವು ಎಂದು ಹೇಳುತ್ತಾರೆ.
ಕಾಂಗ್ರೆಸ್ ನಾಯಕನ ನಿವಾಸದ ಮೇಲೆ ಮತ್ತು ಅವರ ಹಣಕಾಸು ಸಹಾಯಕನ ನಿವಾಸದ ಮೇಲೆ ಆಗಸ್ಟ್ 2017ರಲ್ಲಿ ಐಟಿ ಇಲಾಖೆ ದಾಳಿ ಮಾಡಿತ್ತು. ಈ ದಾಳಿ ವೇಳೆ ಕೆಫೆ ಕಾಫಿ ಡೇ ಮತ್ತು ಸೋಲ್ ಸ್ಪೇಸ್ ಕಂಪೆನಿ ಮಧ್ಯೆ ನಡೆದ ಹಣಕಾಸು ವಹಿವಾಟುಗಳ ಬಗ್ಗೆ ಆಧಾರಗಳು ದೊರೆತವು. ಕೆಫೆ ಕಾಫಿ ಡೇಯಿಂದ ರಾಜಕೀಯ ನಾಯಕನ ಖಾತೆಗೆ ಸುಮಾರು 20 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತು.
ಈ ಇಬ್ಬರ ನಡುವೆ ಹಣಕಾಸು ವಹಿವಾಟಿನಲ್ಲಿ ಸೇತುವೆಯಾಗಿ ಕೆಲಸ ಮಾಡಿದವರು ಸಿಂಗಾಪುರ ಮೂಲದ ವ್ಯಕ್ತಿ ರಜನೀಶ್ ಗೋಪಿನಾಥ್. ಅವರ ಮನೆಯಲ್ಲಿ 1.2 ಕೋಟಿ ರೂಪಾಯಿ ದಾಖಲೆಯಿಲ್ಲದ ಹಣ ಐಟಿ ಅಧಿಕಾರಿಗಳಿಗೆ ಸಿಕ್ಕಿತ್ತು. ಅದು ವಿಜಿ ಸಿದ್ದಾರ್ಥ್ ಅವರಿಗೆ ಸೇರಿದ ಹಣ ಎಂದು ಗೋಪಿನಾಥ್ ನಂತರ ತನಿಖೆ ವೇಳೆ ಹೇಳಿದ್ದರು. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸಿದಾಗ ಹವಾಲಾ ದಂಧೆಯಲ್ಲಿ ತೊಡಗಿರುವುದು ಪತ್ತೆಯಾಯಿತು. ಅದಕ್ಕೆ ಪುಷ್ಟಿ ನೀಡುವ ಹಲವು ಸಂದೇಶಗಳು ಗೋಪಿನಾಥ್ ಮೊಬೈಲ್ ನಲ್ಲಿ ಪತ್ತೆಯಾದವು. ಅವರ ಮೊಬೈಲ್ ನಲ್ಲಿ ನಡೆಸಲಾದ ದೂರವಾಣಿ ಸಂಭಾಷಣೆಯಲ್ಲಿ ಕೂಡ ಇದಕ್ಕೆ ಪುಷ್ಠಿ ನೀಡುವಂತಹ ಸಾಕ್ಷಿಗಳು ಸಿಕ್ಕಿದ್ದವು ಎನ್ನುತ್ತಾರೆ ಐಟಿ ಮೂಲಗಳು.
ರಜನೀಶ್ ಗೋಪಿನಾಥ್ ಮುನೀಶ್ ಗೋಪಿನಾಥ್ ಅವರ ಸೋದರ, ಮುನೀಶ್ ಅವರು ಸಿಸಿಡಿಯಲ್ಲಿ ಹಣಕಾಸು ವಿಭಾಗದ ನಿರ್ದೇಶಕರು. ಇವರ ಮೂಲಕ ಅಕ್ರಮ ಹವಾಲಾ ವಹಿವಾಟು ನಡೆದಿದೆ. ಐಟಿ ಇಲಾಖೆ ತನಿಖೆ ವೇಳೆ ಹವಾಲಾ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ಸಿಸಿಡಿ ಕಂಪೆನಿ ಸಹ ಒಪ್ಪಿಕೊಂಡಿತ್ತು.
ಈ ಬಗ್ಗೆ ಕಾಂಗ್ರೆಸ್ ನಾಯಕನಲ್ಲಿ ಪ್ರತಿಕ್ರಿಯೆ ಪಡೆಯೋಣವೆಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಹಲವು ಬಾರಿ ಸಂಪರ್ಕಿಸಿದರೂ ಕೂಡ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos