ರಾಜ್ಯ

ಕುಶಾಲನಗರ ಬಳಿ ಕಾವೇರಿ ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

Prasad SN

ಮಡಿಕೇರಿ: ಕೊಡಗು ಜಿಲ್ಲೆ ಕುಶಾಲನಗರ ಬಳಿಯ ಕಾವೇರಿ ನದಿಯಲ್ಲಿ ಈಜಾಡಲು ತೆರಳಿದ್ದ ಮೂವರು ಪದವಿ ಪೂರ್ವ ವಿದ್ಯಾರ್ಥಿಗಳು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.

ಮೃತರನ್ನು ಅಕಾಶ್, ಗಗನ್ ಮತ್ತು ಶಶಾಂಕ್ ಎಂದು ಗುರುತಿಸಲಾಗಿದ್ದು, ನತದೃಷ್ಟರೆಲ್ಲ ಮಡಿಕೇರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇವರೆಲ್ಲ ರಮ್ಜಾನ್‌ ಹಬ್ಬದ ರಜೆ ಹಿನ್ನೆಲೆಯಲ್ಲಿ ಕುಶಾಲನಗರದ ಸ್ನೇಹಿತನ ಮನೆಗೆ ಬಂದಿದ್ದರು. ಊಟದ ನಂತರ ಒಂಭತ್ತು ವಿದ್ಯಾರ್ಥಿಗಳ ತಂಡ ನದಿಯಲ್ಲಿ ಈಜಲು ತೆರಳಿದೆ. ಆಕಾಶ್‌ ಮೊದಲು ನದಿಗೆ ಈಜಲು ಇಳಿದಿದ್ದು, ಆತ ಮುಳುಗುತ್ತಿರುವುದನ್ನು ಕಂಡ ಇತರ ಇಬ್ಬರು ಸ್ನೇಹಿತರು ನದಿಗೆ ಹಾರಿದ್ದಾರೆ. ಆದರೆ, ಮೂವರೂ ನೀರಿನಿಂದ ಹೊರಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ.

ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಕುಶಾಲನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

SCROLL FOR NEXT