ವಿಶೇಷ ಪೂಜೆಯಲ್ಲಿ ನಿರತ ಸಚಿವ ಡಿ ಕೆ ಶಿವಕುಮಾರ್
ಚಿಕ್ಕಮಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಈ ವರ್ಷ ಮೇ-ಜೂನ್ ತಿಂಗಳಲ್ಲಿಯೇ ವ್ಯಾಪಕ ಮಳೆಯಾಗುತ್ತಿದ್ದರೂ ಕೂಡ ಹಲವು ಜಿಲ್ಲೆಗಳಲ್ಲಿ ಮಳೆ ಇನ್ನೂ ಸಾಕಷ್ಟು ಬಂದಿಲ್ಲ, ಮಳೆಯ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬೆಳೆಗಳಿಗೆ, ಜಾನುವಾರುಗಳಿಗೆ ನೀರಿಲ್ಲದೆ ಜನರು ಕಂಗಾಲಾಗಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಮಳೆಗಾಗಿ ವರುಣ ದೇವನ ಮೊರೆ ಹೋಗಲಾಗುತ್ತಿದೆ. ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ದೇವಾಲಯಗಳಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯ ಆಗಮನಕ್ಕಾಗಿ ವಿಶೇಷ ಪೂಜೆ ಬೆಳಗ್ಗೆಯಿಂದಲೇ ನಡೆಯುತ್ತಿದೆ. ಮಳೆಗಾಗಿ ವಿಶೇಷ ಪರ್ಜನ್ಯ ಜಪದಲ್ಲಿ ಅರ್ಚಕರು ಮತ್ತು ಜನರು ನಿರತರಾಗಿದ್ದಾರೆ.
ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಇಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪ ಶ್ರೀ ಋಷ್ಯ ಶೃಂಗೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯದಲ್ಲಿ ನಿರತರಾದರು, ಸೂಕ್ತ ಕಾಲದಲ್ಲಿ ರಾಜ್ಯದ ಎಲ್ಲಾ ಕಡೆ ಸಾಕಷ್ಟು ಮಳೆಯಾಗಿ ಬೆಳೆ-ಜಾನುವಾರು, ರೈತರು, ಜನರಿಗೆ ಒಳಿತು ಮಾಡಲಿ ಎಂದು ಸಚಿವ ಶಿವಕುಮಾರ್ ದೇವರ ಮೊರೆ ಹೋದರು. ಅವರಿಗೆ ಸಚಿವ ಪಿ ಟಿ ಪರಮೇಶ್ವರ್ ನಾಯ್ಕ್ ಸಾಥ್ ನೀಡಿದರು.
ಮಡಿಕೇರಿಯಲ್ಲಿ, ಬೆಳಗಾವಿಯ ಸವದತ್ತಿಯ ಶ್ರೀ ರೇಣುಕಾ ದೇವಿ ಯಲ್ಲಮ್ಮ ದೇವಿ ಗುಡ್ಡದಲ್ಲಿ,ಮಡಿಕೇರಿ, ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ, ರಾಮನಗರದಲ್ಲಿ ಮಳೆಗಾಗಿ ಸರ್ಕಾರದಿಂದ ಜಲಾಮೃತ ಅಭಿಷೇಕ, ಪಂಚಾಮೃತ ಅಭಿಷೇಕ, ಹೋಮ, ಹವನ, ವಿಶೇಷ ಪೂಜೆ ಇಂದು ಬೆಳಗ್ಗೆ 6 ಗಂಟೆಯಿಂದಲೇ ನಡೆಯುತ್ತಿದೆ.
ಕಳೆದ ವರ್ಷ ಕೂಡ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೀರಿಗೆ ತತ್ತರ ಕಂಡುಬಂದು ಬರಗಾಲ ಉಂಟಾಗಿತ್ತು. ಬೆಳೆಗಳು ರೈತರಿಗೆ ಕೈಕೊಟ್ಟಿದ್ದವು. ಈ ಹಿನ್ನಲೆಯಲ್ಲಿ ಮಳೆಗಾಲದ ಆರಂಭದಲ್ಲಿಯೇ ಸರ್ಕಾರ ಎಚ್ಚೆತ್ತುಕೊಂಡು ದೇವರ ಮೊರೆ ಹೋಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos