ಚಾಮರಾಜನಗರ: ಕಳೆದ ಭಾನುವಾರ ಸಂಜೆ ಕೊಳ್ಳೆಗಾಲ ತಾಲ್ಲೂಕಿನಲ್ಲಿ ಕಾವೇರಿ ನದಿಯ ಶಿವನಸಮುದ್ರ ಜಲಪಾತದ ಬಳಿ ಓರ್ವ ಮಹಿಳೆ ಸೇರಿದಂತೆ ಪ್ರವಾಸಕ್ಕೆ ತೆರಳಿದ್ದ ಮೂವರು ವ್ಯಕ್ತಿಗಳು ಜಲ ಸಮಾಧಿಯಾಗಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಮನೋಜ್ ಕುಮಾರ್ (23), ಲೋಕೇಶ್ (21) ಮತ್ತು ವೀಣಾ (23) ಮೃತಪಟ್ಟಿದ್ದಾರೆ ಎಂದು ಪೊಲೀಸರು ನಿನ್ನೆ ತಿಳಿಸಿದ್ದಾರೆ.ಮೃತರು ಮೂವರು ಇತರರೊಂದಿಗೆ ಮೋಟರ್ ಸೈಕಲ್ ಗಳಲ್ಲಿ ಜಲಪಾತ ವೀಕ್ಷಣೆಗೆ ಬಂದಿದ್ದರು. ಇವರೆಲ್ಲರೂ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ನೀರಿನ ಸುಳಿಗೆ ಸಿಲುಕಿ ಮುಳುಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೃತದೇಹಗಳನ್ನು ನೀರಿನಿಂದ ಹೊರತೆಗಯಲಾಗಿದ್ದು ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಬಳಿಕ ಮೃತರ ಕುಟುಂಬಗಳಿಗೆ ದೇಹವನ್ನು ಹಸ್ತಾಂತರಿಸಲಾಯಿತು. ಸ್ಥಳೀಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.