ಐಎಂಎ ಜ್ಯುವೆಲ್ಸ್ ಮುಂದೆ ಪ್ರತಿಭಟನೆ ಮಾಡುತ್ತಿರುವ ಹೂಡಿಕೆದಾರರು
ಬೆಂಗಳೂರು: ಈಗ ರಾಜ್ಯಾದ್ಯಂತ ಭಾರಿ ಸುದ್ದು ಮಾಡುತ್ತಿರುವ ಐಎಂಎ ಜ್ಯುವೆಲ್ಸ್ ನಿಂದ ಕಳೆದ ತಿಂಗಳಷ್ಟೇ ತಮ್ಮ ಹೂಡಿಕೆ ಹಣ ವಾಪಸ್ ಪಡೆದಿದ್ದ 30 ಮಂದಿ ಭಾರೀ ವಂಚನೆಯಿಂದ ತಮ್ಮನ್ನು ರಕ್ಷಿಸಿದ ವಕೀಲರಿಗೆ ಧನ್ಯವಾದ ಹೇಳಲು ಮರೆಯಲಿಲ್ಲ.
ಸಾವಿರಾರು ಜನರಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿರುವ ಐಎಂಎ ಮಾಲೀಕ್ ಮೊಹಮ್ಮದ್ ಮನ್ಸೂರ್ ಖಾನ್ ಪರಾರಿಯಾಗುತ್ತಾರೆ ಎಂಬುದು ನನಗೆ ಗೊತ್ತಿತ್ತು ಎಂದು ಐಎಂಎ ಸೇರಿದಂತೆ 12 ವಂಚನೆ ಪ್ರಕರಣಗಳ ವಿರುದ್ಧ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ವಕೀಲ ಮುಜಮಿಲ್ ಮುಸ್ತಾಖ್ ಶಾಹ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ನಾನು ಕಳೆದ ಫೆಬ್ರವರಿಯಲ್ಲಿ ಐಎಂಎ ವಿರುದ್ಧ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪಿಐಎಲ್ ಸಲ್ಲಿಸಿದ್ದೆ. ಏಪ್ರಿಲ್ 10ರಂದು ಪಿಐಎಲ್ ವಿಚಾರಣೆ ನಡೆಸಿದ ಕೋರ್ಟ್ ಈ ಬಗ್ಗೆ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿತ್ತು. ಆದರೆ ಪೊಲೀಸರು ಯಾವುದೇ ವರದಿ ಸಲ್ಲಿಸಲಿಲ್ಲ ಮತ್ತು ಕ್ರಮ ಸಹ ತೆಗೆದುಕೊಳ್ಳಲಿಲ್ಲ. ಪಿಐಎಲ್ ನಲ್ಲಿ ಐಎಂಎ ಜನರಿಗೆ ಹೇಗೆ ವಂಚಿಸುತ್ತಿದೆ ಎಂಬುದನ್ನು ವಿವರಿಸಲಾಗಿದ್ದು, ಈ ಕುರಿತು ಗೃಹ ಸಚಿವರಿಗೆ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ನಾವು ವರದಿ ಸಹ ನೀಡಿದ್ದೇವೆ ಎಂದು ವಕೀಲ ಮುಸ್ತಾಖ್ ಶಾ ಅವರು ಹೇಳಿದ್ದಾರೆ.
ವಂಚನೆ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿರುವುದನ್ನು ಅರಿತ ನಾವು, ಇದರಲ್ಲಿ ರಾಜಕೀಯ ನಾಯಕರ ಮತ್ತು ಪ್ರಭಾವಿಗಳ ಕೈವಾಡ ಇದೆ ಎಂದು ಭಾವಿಸಿ ನಾನು ಹಾಗೂ ನನ್ನ 20 ಸಂಬಂಧಿಕರು ಐಎಂಎನಲ್ಲಿ ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ ಪಡೆದೆವು ಎಂದು ಸದಾಫರ್ ಎಂಬ ಹೂಡಿಕೆದಾರರು ತಿಳಿಸಿದ್ದಾರೆ.
ಮತ್ತೊಬ್ಬ ಹೂಡಿಕೆದಾರರಾದ ಸಮೀರ್ ಅವರು ಸುಮಾರು 100 ಜನರೊಂದಿಗೆ ತಮ್ಮ ಸ್ನೇಹಿತ ವಕೀಲ ಮುಸ್ತಾಖ್ ಶಾ ಮೂಲಕ ಪಿಐಎಲ್ ಹಾಕಿದ್ದು, ಹಣ ಹೂಡಿಕೆ ಮಾಡಿ ಆರು ತಿಂಗಳ ನಂತರ ಐಟಿ ಫೈಲ್ ಮಾಡಲು ತಮ್ಮ 5 ಲಕ್ಷ ಹಣ ಹೂಡಿಕೆ ಬಗ್ಗೆ ವಿವರ ನೀಡುವಂತೆ ಕೇಳಿದ್ದರು. ಆದರೆ ಐಎಂಎ ಯಾವುದೇ ವಿವರ ನೀಡದಿದ್ದಾಗ ಪಿಐಎಲ್ ಹಾಕಲು ನಿರ್ಧರಿಸಲಾಯಿತು ಎಂದರು. ಅಲ್ಲದೆ ನಮ್ಮ ಹಣವನ್ನು ಹಿಂಪಡೆದೆವು. ಆದರೆ ಕೆಲವರು ಮತ್ತೆ ಹೂಡಿಕೆ ಮಾಡಿದ್ದು, ಈಗ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಮೀರ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos