ಬೆಂಗಳೂರು: ಗುಜರಾತ್ ನಲ್ಲಿ ವ್ಯಾಪಕ ಭೀತಿಗೆ ಕಾರಣವಾಗಿರುವ ವಾಯು ಚಂಡಮಾರುತದ ಎಫೆಕ್ಟ್ ಕರ್ನಾಟಕದ ಮೇಲೂ ಆಗುತ್ತಿದ್ದು, ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಮುಂಗಾರು ಮಳೆ ತಡವಾಗಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ವರದಿಯೊಂದರ ಅನ್ವಯ ಈ ಬಾರಿ ಮುಂಗಾರು ಮಳೆ ರಾಜ್ಯ ಪ್ರವೇಶಿಸಲು ‘ವಾಯು’ ಚಂಡಮಾರುತ ಅಡ್ಡಿಯಾಗಿ ಪರಿಣಮಿಸಿದ್ದು, ದಶಕದ ನಂತರ ಮುಂಗಾರು ಪ್ರವೇಶ ಇಷ್ಟೊಂದು ತಡವಾಗಿದೆ ಎನ್ನಲಾಗಿದೆ.
ಜೂನ್ 8ರಂದೇ ಮುಂಗಾರು ಕೇರಳವನ್ನು ಪ್ರವೇಶಿಸಿದ್ದು, ಇದೇ ವಾರದಲ್ಲಿ ಮುಂಗಾರುಮಳೆ ರಾಜ್ಯಕ್ಕೆ ಪ್ರವೇಶ ಮಾಡಬೇಕಿತ್ತು. ಆದರೆ ಆದರೆ, 'ವಾಯು' ಚಂಡಮಾರುತ ತೀವ್ರಗೊಂಡು ಮೋಡಗಳನ್ನು ಉತ್ತರದ ಕಡೆಗೆ ಹೊತ್ತೊಯ್ದಿದೆ. ಹೀಗಾಗಿ ಮುಂಗಾರು ದುರ್ಬಲ ಗೊಂಡಿತು ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 13ರಂದು ಅಂದರೆ ನಾಳೆ ಗೋವಾ, ಗುಜರಾತ್ ಕರಾವಳಿಯಲ್ಲಿ ವಾಯು ಚಂಡಮಾರುತ ಹಾದು ಹೋಗಲಿದ್ದು, ನಂತರ ಅದು ದುರ್ಬಲವಾಗುವ ಸಾಧ್ಯತೆ ಇದೆ. ಇದರ ನಡುವೆಯೇ, ಬುಧವಾರ ಅಥವಾ ಗುರುವಾರ ಮುಂಗಾರು ಅಧಿಕೃತವಾಗಿ ರಾಜ್ಯವನ್ನು ಪ್ರವೇಶಿಸಿದರೂ ಅಷ್ಟೇನೂ ಪ್ರಭಾವ ಬೀರುವುದಿಲ್ಲ. ಚಂಡಮಾರುತ ಸಂಪೂರ್ಣ ಕಡಿಮೆಯಾದರೆ ಜೂನ್ 16ರ ನಂತರ ಮುಂಗಾರು ಬಲಿಷ್ಠವಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇನ್ನು ವಾಯು ಚಂಡಮಾರುತ ಪರಿಣಾಮ ಕರ್ನಾಟಕದ ಮೇಲೂ ಆಗಲಿದ್ದು, ಚಂಡಮಾರುತ ಅಪ್ಪಳಿಸುವ ಹೊತ್ತಿಗೆ ಕರ್ನಾಟಕದ ಹಲವೆಡೆ ಕಡಿಮೆ ಪ್ರಮಾಣ ಮಳೆಯಾಗಲಿದೆಯ ಚಂಡಮಾರುತ ಗುಜರಾತ್ ಅನ್ನು ಹಾದು ಹೋದ ಬಳಿಕ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.