ದೇಶದಲ್ಲೇ ಮೊದಲು! ಕಟ್ಟಡಗಳ ನಕ್ಷೆ ಅನುಮೋದನೆಗೆ ಆನ್ಲೈನ್, ಭೂಮಿ ಜಾಲತಾಣಕ್ಕೆ ಸಿಎಂ ಚಾಲನೆ
ಬೆಂಗಳೂರು: ನಗರದ ಅಭಿವೃದ್ಧಿಗೆ ಕಟ್ಟಡ,ನಕ್ಷೆ ಅನುಮೋದನೆ ಬಹಳ ಮುಖ್ಯವಾಗಿದ್ದು, ಕಟ್ಟಡದ ಪರವಾನಿಗೆ ಪಡೆಯಲು ಇಲಾಖೆಯಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ತಂತ್ರಾಂಶ ಆಧಾರಿತ ಅಂತರ್ಜಾಲ ವ್ಯವಸ್ಥೆ ಜಾರಿಗೆ ಬಂದಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆಧುನಿಕ ವ್ಯವಸ್ಥೆ ಅನುಷ್ಠಾನಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ‘’ಭೂಮಿ-ಕಟ್ಟಡ ನಕ್ಷೆಗಳ ಅನುಮೋದನೆಗೆ ತಂತ್ರಾಂಶ-ವೆಬ್ ಸೈಟ್ ‘’ ಲೋಕಾರ್ಪಣೆಗೊಳಿಸಿ ಬಳಿಕ ಅವರು ಮಾತನಾಡಿದರು.
ಭೂ ಉಪಯೋಗ, ಅನುಮೋದನೆ, ಕಟ್ಟಡದ ಯೋಜನೆ-ಅನುಮೋದನೆ ಸೇರಿದಂತೆ ಇನ್ನಿತರ ಒಪ್ಪಿಗೆ ಪಡೆಯಲು ತಂತ್ರಾಂಶ ಬಿಡುಗಡೆಗೊಳಿಸಲಾಗಿದೆ. ಇಲಾಖೆಯ ವೆಬ್ ಸೈಟ್ ನಲ್ಲಿ ಬಡಾವಣೆ, ಭೂಪರಿವರ್ತನೆ ಅನುಮೋದನೆ, ಸೇರಿ ಒಟ್ಟು 14 ಪರವಾನಿಗೆಗಳನ್ನು ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ)ವನ್ನು ಇದಕ್ಕೆ ಜೋಡಿಲಾಗುವುದು ಎಂದರು.
ರಾಜ್ಯದಲ್ಲಿ ಭೂಮಿ ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ನಕ್ಷೆಗಳ ಪರವಾನಿಗೆಯನ್ನು ಸರಳಗೊಳಿಸಲಾಗಿದೆ. ಈ ಮೊದಲು ಪರವಾನಿಗೆ, ಅನುಮೋದನೆ ಪಡೆಯಲು ಇಲಾಖೆಯಿಂದ ಇಲಾಖೆಗೆ ಹಲವು ಬಾರಿ ಅಲೆದಾಡಬೇಕಿತ್ತು. ಇದರಿಂದ ಜನರ ಹಣ ಹಾಗೂ ಸಮಯ ವ್ಯರ್ಥವಾಗುತ್ತಿತ್ತು. ತಂತ್ರಾಂಶ ಬಳಕೆಯಿಂದಾಗಿ ಜನರ ಹಣ, ಸಮಯ ಉಳಿತಾಯವಾಗುವ ಜೊತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ ಎಂದರು.
ಇದೇ ಸಂದರ್ಭದಲ್ಲಿ ನಗರದಲ್ಲಿ ಉಪನಗರ ರೈಲು ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮಾತನಾಡಿ, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಭೂಮಿ ಮತ್ತು ಕಟ್ಟಡ ನಕ್ಷೆಗಳ ಅನುಮೋದನೆಗಾಗಿಯೇ ಈ ತಂತ್ರಾಂಶ ಬಿಡುಗಡೆ ಮಾಡಲಾಗಿದೆ. ಭೂ ಉಪಯೋಗ, ಕಟ್ಟಡ ನಕ್ಷೆಗೆ ಅನುಮೋದನೆ ಸೇರಿದಂತೆ ಇನ್ನಿತರ ಒಪ್ಪಿಗೆಗಳನ್ನು ತಂತ್ರಾಶದಲ್ಲಿ ಪಡೆಯಬಹುದು ಎಂದರು. ರಾಜ್ಯದ ಜನರಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ತಂತ್ರಾಂಶ-ವೆಬ್ಸೈಟ್ ನಿಂದಾಗಿ ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಕಡಿವಾಣ ಬೀಳುವ ಜೊತೆಗೆ ಶೀಘ್ರವಾಗಿ ಕೆಲಸಗಳು ನಡೆಯಲಿವೆ. ಅನ್ಲೈನ್ನಲ್ಲಿ ಕಟ್ಟಡ ನಕ್ಷೆ, ಭೂ ಉಪಯೋಗಗಳಿಗೆ ಒಪ್ಪಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪೇಯಿಂಗ್ ಗೆಸ್ಟ್ ಹಾಗೂ ಹೋಮ್ ಸ್ಟೇ ನಿವಾಸಿಗಳಿಗೆ ಮೂಲಸೌಲಭ್ಯ ಹಾಗೂ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಪಿಜಿಗಳಿಗೆ ಹೊಸ ಕಾನೂನು ತರಲು ಸರ್ಕಾರ ನಿರ್ಧರಿಸಿದೆ. ಪಿಜಿ, ಹೋಂ ಸ್ಟೇಗಳಿಗೆ ಈಗ ಸೂಕ್ತವಾದ ನಿಯಮವಿಲ್ಲದ ಕಾರಣ ಅಗತ್ಯ ನಿಯಮ ರೂಪಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅತಿಶೀಘ್ರದಲ್ಲಿ ಹೊಸ ಕಾನೂನು ಜಾರಿಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ನಗರಾಭಿವೃದ್ಧಿ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು. ಯುಎನ್ಐ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos