ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ಮಾಡಿರುವ ಪಟ್ಟಿಯಲ್ಲಿ 973 ಯೋಜನೆಗಳ ಲೈಸೆನ್ಸ್ ಅವಧಿ ಮುಕ್ತಾಯವಾಗಿದೆ. ಆದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ರೇರಾ ಅಧಿಕಾರಿಗಳು ಈ ಯೋಜನೆಗಳಲ್ಲಿ ಗ್ರಾಹಕರು ಖರೀದಿ ಅಥವಾ ಹೂಡಿಕೆ ಮಾಡಬೇಡಿ ಎಂದಷ್ಟೆ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ರಚನೆಗೊಂಡ ರೇರಾದಡಿ 973 ನಿಯಮ ಪಾಲಿಸದ ತಪ್ಪಿತಸ್ಥರಿದ್ದಾರೆ. ರೇರಾ ವೆಬ್ ಸೈಟ್ ನಲ್ಲಿರುವ ಪ್ರಕಾರ, ಒಟ್ಟು 229 ವಿಸ್ತರಣೆ ಅರ್ಜಿಗಳಲ್ಲಿ 164 ಅರ್ಜಿಗಳು ಪ್ರಕ್ರಿಯೆ ಹಂತದಲ್ಲಿದ್ದು 65 ಪ್ರಶ್ನಾಹಂತದಲ್ಲಿವೆ. ಇಲ್ಲಿ ಕುತೂಹಲಕಾರಿ ವಿಷಯವೆಂದರೆ ಯಾವುದೇ ಅರ್ಜಿಗಳು ತಿರಸ್ಕೃತಗೊಂಡಿಲ್ಲ.
ವಂಚಕರ ವಿರುದ್ಧ ಕ್ರಮ ಕೈಗೊಳ್ಳಲು ರೇರಾ ಅಧಿಕಾರಿಗಳಿಗೆ ಯಾವುದೇ ಆಸಕ್ತಿಯಿಲ್ಲ ಮತ್ತು ಅವರಿಗೆ ಹೆಚ್ಚಿನ ಅಧಿಕಾರ ಕೂಡ ಇಲ್ಲ. ರಿಯಲ್ ಎಸ್ಟೇಟ್ ಉದ್ಯಮಿಗಳ ಕೈಗೊಂಬೆಯಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎನ್ನುತ್ತಾರೆ ಗ್ರಾಹಕರು ಮತ್ತು ಹೋರಾಟಗಾರರು. ಇಲ್ಲದಿದ್ದರೆ ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಅರ್ಜಿ ತಿರಸ್ಕೃತಗೊಂಡಿಲ್ಲವೆಂದರೆ ಏನರ್ಥ ಎಂದು ಕೇಳುತ್ತಾರೆ ಮನೆ ಖರೀದಿಸಿದ ಗ್ರಾಹಕಿಯೊಬ್ಬರು.
ಇಲ್ಲಿ ಯಾವುದೇ ಪಾರದರ್ಶಕತೆ ಮತ್ತು ನಿಖರತೆ ಉಳಿದಿಲ್ಲ, ದಾಖಲಾದ ಪ್ರಾಜೆಕ್ಟ್ ಗಳ ಅವಧಿ ಮುಗಿದಿದೆ, ಅಂತಹ ಕಂಪೆನಿಗಳೊಂದಿಗೆ ವ್ಯವಹರಿಸಬೇಡಿ ಎಂದು ವೆಬ್ ಸೈಟ್ ನಲ್ಲಿ ಹಾಕುವ ಮೂಲಕ ಅಧಿಕಾರಿಗಳು ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ ಖರೀದಿದಾರರ ಗತಿಯೇನು ಎಂದು ಕೇಳುತ್ತಾರೆ ರೇರಾ ಕರ್ನಾಟಕ ವಿಭಾಗದ ಸಂಚಾಲಕ ಎಂಎಸ್ ಶಂಕರ್.
ಈ ಬಗ್ಗೆ ಕೆ-ರೇರಾ ಅಧ್ಯಕ್ಷ ಎಂ ಆರ್ ಕಂಬ್ಲೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿ, ಇದೇ ಮೊದಲ ಬಾರಿಗೆ ಪ್ರಾಧಿಕಾರ ಇಷ್ಟೊಂದು ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಅಧಿಕಾರಿಗಳು ಪ್ರತಿ ಕೇಸನ್ನು ಅಧ್ಯಯನ ಮಾಡಿ ಅವರಿಗೆ ನೊಟೀಸ್ ಕಳುಹಿಸುತ್ತದೆ. ಇದುವರೆಗೆ ಯಾವುದೇ ತಪ್ಪಿತಸ್ಫರಿಗೆ ಶಿಕ್ಷೆಯಾಗಿಲ್ಲ ಎಂಬುದನ್ನು ಒಪ್ಪಿಕೊಂಡ ಅವರು ಕಠಿಣ ಶಿಕ್ಷೆ ವಿಧಿಸುವ ಕ್ರಮ ತೆಗೆದುಕೊಳ್ಳುವ ಮುನ್ನ ಸೂಕ್ತ ವಿಧಾನಗಳನ್ನು ಅನುಸರಿಸಬೇಕಿದೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos