ಬೆಂಗಳೂರು: ಕ್ಯಾನ್ಸರ್ ಪೀಡಿತರು ಹಾಗೂ ಇದರಿಂದ ಬದುಕುಳಿದವರಿಗೆ ಪೂರ್ಣ ಪ್ರಮಾಣದ ಸಹಾಯ ಒದಗಿಸುವುದಲ್ಲದೆ ಅವರಲ್ಲಿ ಬದುಕುವ ಭರವಸೆ ಮೂಡಿಸುವುದು ನಮ್ಮ ‘ವಿ ಕ್ಯಾನ್’ ಅಭಿಯಾನದ ಮುಖ್ಯ ಉದ್ದೇಶ ಎಂದು ಮಣಿಪಾಲ ಆಸ್ಪತ್ರೆಯ ಕ್ಯಾನ್ಸರ್ ರೋಗ ತಜ್ಞೆ ಡಾ.ಪೂನಂ ಪಾಟೀಲ್ ತಿಳಿಸಿದರು.
ಮಂಗಳವಾರ ಪತ್ರಕರ್ತರ ಭವನದಲ್ಲಿ ‘ವಿ ಕ್ಯಾನ್’ ಅಭಿಯಾನ ಅನಾವರಣಗೊಳಿಸಿ ಅವರು ಮಾತನಾಡಿದರು. ಕ್ಯಾನ್ಸರ್ ರೋಗಿಗಳು ಜೀವನ ನಡೆಸಲು ಅಗತ್ಯವಾದ ಎಲ್ಲಾ ರೀತಿಯ ಭರವಸೆಯನ್ನು ವಿ ಕ್ಯಾನ್ ಅಭಿಯಾನ ನೀಡಲಿದೆ. ಚಿಕಿತ್ಸಾ ಅಧಿವೇಶನಗಳು, ವಿವಿಧ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅನುವು ನೀಡುವ ಅನೇಕ ಕಾರ್ಯಕ್ರಮಗಳನ್ನು ಅಭಿಯಾನದ ಮೂಲಕ ಕೈಗೊಳ್ಳುವುದಾಗಿ ಎಂದು ಹೇಳಿದರು.
ಕ್ಯಾನ್ಸರ್ ರೋಗ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸೋಮಶೇಖರ್ ಮಾತನಾಡಿ, ಭಾರತದಲ್ಲಿ 11 ಲಕ್ಷ 50 ಸಾವಿರಕ್ಕೂ ಅಧಿಕ ಕ್ಯಾನ್ಸರ್ ಪೀಡಿತರಿದ್ದಾರೆ. ಕ್ಯಾನ್ಸರ್ ಗುಣಪಡಿಸಬಹುದಾದ ರೋಗವಾಗಿದ್ದರೂ, ಸಾವು ಖಚಿತ ಎಂಬ ಭಾವನೆಯಿಂದ ರೋಗಿಗಳು ಸಕಾಲಕ್ಕೆ ಚಿಕಿತ್ಸೆ ಪಡೆಯದೆ ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಆತ್ಮಸ್ಥೈರ್ಯ ಕಳೆದುಕೊಳ್ಳುವುದು. ಹಾಗಾಗಿ ಕ್ಯಾನ್ಸರ್ ರೋಗದಿಂದ ಬದುಕುಳಿದ ವ್ಯಕ್ತಿಗಳಿಗೆ ಹಾಗೂ ಕ್ಯಾನ್ಸರ್ ಪೀಡಿತರಿಗೆ ಭಾವನಾತ್ಮಕವಾಗಿ ಬಲಗೊಳ್ಳಲು ಮಾರ್ಗದರ್ಶನ ನೀಡಲಾಗುವುದು ಹಾಗೂ ವಿ ಕ್ಯಾನ್ ಅಭಿಯಾನದ ಮೂಲಕ ಆತ್ಮ ಸ್ಥೈರ್ಯ, ಉತ್ಸಾಹ ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದರು.
ಇನ್ನು ಮುಂದೆ ಕ್ಯಾನ್ಸರ್ ಪೀಡಿತರು ಮಣಿಪಾಲ್ ಆಸ್ಪತ್ರೆಯಿಂದ ಪ್ರಾರಂಭವಾಗಿರುವ ಈ ನೂತನ ಯೋಜನೆ ಮೂಲಕ ಎಲ್ಲಾ ಬಗೆಯ ನೆರವನ್ನೂ ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.