ಚಾಮರಾಜನಗರ: ಭಾರೀ ಕಾಳ್ಗಿಚ್ಚಿನಿಂದ ಫೆಬ್ರವರಿ 23ರಂದು ಸಾರ್ವಜನಿಕರಿಗೆ ನಿಷೇಧಿಸಿದ್ದ ಪ್ರಸಿದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸಫಾರಿ ಶುಕ್ರವಾರದಿಂದ ಪುನರಾಂಭಗೊಂಡಿದೆ.
ಇತ್ತೀಚೆಗೆ ಬಂಡೀಪುರದಲ್ಲಿ ಕಂಡುಬಂದಿದ್ದ ಕಾಳ್ಗಿಚ್ಚಿಗೆ 8,000 ಎಕರೆಗೂ ಅಧಿಕ ಅರಣ್ಯ ನಾಶಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಫಾರಿಯನ್ನು ಸ್ಥಗಿತಗೊಳಿಸಲಾಗಿತ್ತು.
ಪ್ರವಾಸಿಗರ ಆಗಮನಕ್ಕೆ ಯಾವುದೇ ತೊಂದರೆ ಇಲ್ಲ. ಹುಲಿ, ಚಿರತೆಗಳು ಜನರಿಗೆ ನೋಡಲು ಸಾಧ್ಯವಾಗಿದೆ. ಇದಲ್ಲದೆ ಮಚ್ಚೆಯುಳ್ಳ ಚಿಂಕೆ, ಕಾಡೆಮ್ಮೆ ಮತ್ತಿತರ ಪ್ರಾಣಿಗಳು ಕೂಡ ಕಂಡಿವೆ ಎಂದು ಹೊಸ ಬಂಡೀಪುರ ಹುಲಿ ಸಂರಕ್ಷಣಾ ನಿರ್ದೇಶಕ ಟಿ.ಬಾಲಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೇಸಿಗೆ ಕಾಲ ಇನ್ನೂ 70 ದಿನಗಳ ಕಾಲ ಇರುವುದರಿಂದ ಅರಣ್ಯ ಸಂರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅರಣ್ಯ ಸಿಬ್ಬಂದಿಯೊಂದಿಗೆ ನಡೆಸಿದ ಸಭೆಯಲ್ಲಿ ಬಾಲಚಂದ್ರ ಸೂಚನೆ ನೀಡಿದ್ದಾರೆ.
ಬೇಸಿಗೆಕಾಲದ 35 ದಿನಗಳು ಈಗಾಗಲೇ ಕಳೆದಿವೆ. ಇನ್ನೂ 70 ದಿನ ಬಾಕಿ ಇವೆ. ಯಾವುದೇ ಸ್ಥಳದಲ್ಲಿ ಬೆಂಕಿ ಅನಾಹುತ ಸಂಭವಿಸದಂತೆ ಅರಣ್ಯ ಸಿಬ್ಬಂದಿ ಎಲ್ಲಾ ಕಡೆ ಹದ್ದಿನ ಕಣ್ಣಿಟ್ಟಿರಬೇಕು. ಅರಣ್ಯದ ಅಂಚಿನಲ್ಲಿರುವ ಗ್ರಾಮಸ್ಥರು ಮತ್ತು ನಿವಾಸಿಗಳ ಸಹಕಾರ ಪಡೆದುಕೊಂಡು ಅರಣ್ಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಭೆಯಲ್ಲಿ ಬಾಲಚಂದ್ರ ಸೂಚನೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos