ಮಲ್ಪೆ ಬೀಚ್ ನಲ್ಲಿ ಬಾಂಬ್ ಸ್ಪೋಟಿಸುವ ಬೆದರಿಕೆ: ಯುವಕನ ಬಂಧನ
ಉಡುಪಿ: ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿ ಮಲ್ಪೆ ಬೀಚ್ ನಲ್ಲಿ ಬಾಂಬ್ ಸ್ಪೋಟಿಸುವ ಬೆದರಿಕೆ ಹಾಕಿದ್ದಲ್ಲದೆ ತನ್ನ ಹೇಳಿಕೆಯನ್ನು ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದ ಯುವಕನನ್ನು ಉಡುಪಿ ಪೋಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಲ್ಪೆ ಶೇಖರ್ ಪೂಜಾರಿಯವರ ಪುತ್ರ ಸೃಜನ್ ಪೂಜಾರಿ (18) ಎಂದು ಗುರುತಿಸಲಾಗಿದೆ. ಶುಕ್ರವಾರ ಈತ ಅರ್ಧ ಮುಖಕ್ಕೆ ಕಪ್ಪು ಬಟ್ಟೆ ಸುತ್ತಿಕೊಂಡು ಹಿಂದಿಯಲ್ಲಿ ಮಾತನಾಡುತ್ತಾ "ಪಾಕಿಸ್ತಾನ ಜಿಂದಾಬಾದ್, ನಮ್ಮ ಮುಂದಿನ ಗುರಿ ಮಲ್ಪೆ ಬೀಚ್, ಅಲ್ಲಿ ದೊಡ್ಡ ಪ್ರಮಾಣದ ಸ್ಪೋಟ ನಡೆಸಲಿದ್ದೇವೆ. ಇದರಿಂದ ಫುಟ್ ಪಾತ್ ವ್ಯಾಪಾರಿಗಳು ಸಾಯಲಿದ್ದಾರೆ" ಎನ್ನುವುದಾಗಿ ಹೇಳಿಕೊಂಡಿರುವ ವೀಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದ.
ಇದರಿಂದ ಮಲ್ಪೆ ಸುತ್ತಮುತ್ತಲ ಸಾರ್ವಜನಿಕರು ಗಾಬರಿಗೊಂಡಿದ್ದು ಸಾರ್ವಜನಿಕರ ಮಾಹಿತಿ ಮೇರೆಗೆ ಉಡುಪಿ ಎಸ್ಪಿ ನಿಶಾ ಜೇಮ್ಸ್ ತುರ್ತು ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಲು ಆದೇಶಿಸಿದ್ದಾರೆ. ಅದರಂತೆ ಪೋಲೀಸರು ತನಿಖೆ ನಡೆಸಿ ಸೃಜನ್ ನನ್ನು ಬಂಧಿಸಿದ್ದಾರೆ.
ಬಂಧಿತ ಸೃಜನ್ ತಾನೇ ವೀಡಿಯೋ ಮಾಡಿ ಮೊಬೈಲ್ ಗೆ ಅಪ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಮನೆಯಲ್ಲಿ ಪೋಷಕರು ತನಗೆ ಯಾವಾಗಲೂ ಬೈಯ್ಯುತ್ತಿದ್ದ ಕಾರಣದಿಂದ ನಾನು ಹೀಗೆ ಮಾಡಿದೆ ಎಂದು ಹೇಳಿದ್ದಾನೆ.
"ಈತ ಮನೆಯಲ್ಲಿ ಕುರಿ ಕಾಯುವ ಕೆಲಸ ಮಾಡುತ್ತಿದ್ದು ಈತ ಕೆಲಸ ಸರಿಯಾಗಿ ಮಾಡದ ಹಿನ್ನೆಲೆಯಲ್ಲಿ ಪೋಷಕರು ಬೈಯ್ದಿದ್ದಾರೆ. ಆಗ ಯುವಕ ಬೀಚ್ ಗೆ ತೆರಳಿ ಈ ವೀಡಿಯೋ ಮಾಡಿ ಸಾಮಾಜಿಕ ತಾಣಕಗಳಲಿ ಹರಿಬಿಟ್ಟಿದ್ದಾನೆ. ಈತನಿಂದ ಮೊಬೈಲ್ ಫೋನ್ ಹಾಗೂ ಒಂದು ಟವೆಲ್ ಅನ್ನು ವಶಕ್ಕೆ ಪಡೆಯಲಾಗಿದೆ" ಉಡುಪಿ ಎಸ್ಪಿ ನಿಶಾ ಜೇಮ್ಸ್ ಹೇಳಿದ್ದಾರೆ.
ಇನ್ನು ಈತ ವೀಡಿಯೋ ಸಂದೇಶದ ಮೂಲಕ ಮಲ್ಪೆ ಸುತ್ತಲಿನ ಪ್ರದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಉದ್ದೇಶಿಸಿದ್ದ ಎನ್ನಲಾಗಿದೆ. ಇದಕ್ಕಾಗಿ ಆತ ಉದ್ದೇಶಪೂರ್ವಕ ಹಿಂದಿ ಬಾಷೆ ಬಳಸಿದ್ದಲ್ಲದೆ ಭಾರತ-ಪಾಕ್ ನಡುವೆ ಯುದ್ಧದ ವಾತಾವರಣದ ಲಾಭ ಪಡೆದಿದ್ದ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos