ವಿಜಯಪುರ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪರ ಪೋಸ್ಟ್ ಮಾಡಿದ್ದ ಬಿಎಲ್ ಡಿಈ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪನಿಗೆ ಅಲ್ಲಿನ ವಿದ್ಯಾರ್ಥಿಗಳೇ ಬುದ್ಧಿಕಲಿಸಿದ್ದರೆ, ಇತ್ತ ರಾಜ್ಯ ಗೃಹ ಸಚಿವ ಎಂಬಿ ಪಾಟೀಲ್ ಮಾತ್ರ ಪ್ರಾಧ್ಯಾಪಕನನ್ನು ಸಮರ್ಥಿಸಿಕೊಂಡಿದ್ದಾರೆ.
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದರು. ಇದರ ಬೆನ್ನಲ್ಲೇ ಪ್ರಾಧ್ಯಾಪಕ ಸಂದೀಪ್ ಎಂಬಾತ ಇಮ್ರಾನ್ ಖಾನ್ ಪರ ಪೋಸ್ಟ್ ಮಾಡಿದ್ದರು. ಇದರಿಂದ ಕೆರಳಿದ ಎಬಿವಿಬಿಯವರು ಕಾಲೇಜಿಗೆ ಬಂದು ಬುದ್ಧಿ ಕಲಿಸಿ ಪ್ರಾಧ್ಯಾಪಕನಿಂದ ಮಂಡಿಯೂರಿ ಕ್ಷಮೆ ಕೇಳಿಸಿದ್ದರು.
ಈ ಬಗ್ಗೆ ಮಾತನಾಡಿದ ಎಂಬಿ ಪಾಟೀಲ್ ಅವರು ಎಬಿವಿಪಿಯವರು ಕಾಲೇಜಿನೊಳಗೆ ಬಂದು ನೈತಿಕ ಪೊಲೀಸ್ ಗಿರಿ ಮಾಡಿದ್ದಾರೆ. ಪೋಸ್ಟ್ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಕಾನೂನು ಚೌಕಟ್ಟಿನೊಳಗೆ ಹೋರಾಡಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಪ್ರಾಧ್ಯಾಪಕ ಯುದ್ಧವಾದರೆ ಎರಡು ದೇಶದ ಜನರಿಗೂ, ದೇಶಕ್ಕೂ ಹಾನಿಯಾಗುತ್ತದೆ ಹೀಗಾಗಿ ಅವರ ಈ ಪೋಸ್ಟ್ ಹಾಕಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ.
ದೇಶದ ವಿರುದ್ಧ ಹಾಗೂ ಭಾರತೀಯ ಯೋಧರ ವಿರುದ್ಧ ಮಾತನಾಡಿದರೆ ಅಥವಾ ಪೋಸ್ಟ್ ಮಾಡಿದರೆ ಉಗ್ರ ಕ್ರಮಕೈಗೊಳ್ಳಲಾಗುವುದು. ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಆದರೆ ಪ್ರಾಧ್ಯಾಪಕರ ಪೋಸ್ಟ್ ಭಿನ್ನವಾಗಿದೆ ಎಂದು ಹೇಳಿದ್ದಾರೆ.