ರಾಜ್ಯ

ಮಾ.13 ರಿಂದ ಕೃಷ್ಣಮಠಕ್ಕೆ ಚಿನ್ನದ ಮೇಲ್ಛಾವಣಿ ಜೋಡಣೆ ಕಾರ್ಯ ಪ್ರಾರಂಭ: ಪಲಿಮಾರು ಶ್ರೀ

Raghavendra Adiga
ಉಡುಪಿ: ಉಡುಪಿ ಕೃಷ್ಣ ಮಠದ ಶ್ರೀ ಕೃಷ್ಣನ ದೇವಾಲದ ಮೇಲ್ಚಾವಣಿಗೆ ಚಿನ್ನದ ತಗಡನ್ನು ಹೊದಿಸುವ 40 ಕೋಟಿ ರೂ. ವೆಚ್ಚದ ಯೋಜನೆ ಪರ್ಯಾಯ ಶ್ರೀ ಪಲಿಮಾರು ಮಠದ ಯತಿಗಳು ಸಂಕಲ್ಪಿಸಿದ್ದಾರೆ.  ಯೋಜನೆಯು ಜೂನ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಂಬಂಧ ಸುಮಾರು 15 ಅಕ್ಕಸಾಲಿಗರು ನಿರಂತರ ಕೆಲಸದಲ್ಲಿ ತೊಡಗಿದ್ದಾರೆ. ಪ್ರಸ್ತುತ ತಾಮ್ರಲೇಪಿತ ತಗಡುಗಳನ್ನು ಹೊದಿಸಿರುವ ಮೇಲ್ಛಾವಣಿಯಿದ್ದು ಮಾರ್ಚ್ 13ರಿಂಡ ಹೊಸದಾದ ಚಿನ್ನದ ತಗಡಿನ ಅಳವಡಿಕೆಗೆ ನಿರ್ಧರಿಸಲಾಗಿದೆ.ಸಂಪೂರ್ಣ ಯೋಜನೆಗಾಗಿ 100 ಕೆಜಿ ಚಿನ್ನದ ಅಗತ್ಯವಿದೆ.
ಶ್ರೀ ಕೃಷ್ಣಮಠದ ಗರ್ಭಗುಡಿಯ ಮೇಲ್ಛಾವಣಿಗೆ ತನ್ನ ಎರಡು ವರ್ಷದ ಪರ್ಯಾಯ ಅವಧಿಯಲ್ಲಿ ಚಿನ್ನದ ತಗಡುಗಳನ್ನು ಹೊದಿಸುವುದಾಗಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥರು ಮಾಡಿರುವ ಸಂಕಲ್ಪಕ್ಕೆ ಭಕ್ತರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಇದಾಗಲೇ ಶೇ.7ರಷ್ಟು ಚಿನ್ನ ಸಂಗ್ರಹವಾಗಿದೆ.ಉತ್ತಮ  ಬಾಳಿಕೆ, ಆಕರ್ಷಕ ಬಣ್ನವನ್ನೂ ಹೊಂದಿರಲು  23 ಕ್ಯಾರೆಟ್ ಚಿನ್ನದಿಂದ ಈ ಫಲಕಗಳನ್ನು ತಯಾರಿಸಲಾಗುತ್ತಿದೆ.
ಮಾರ್ಚ್ 13ರಂದು ಬೆಳಿಗ್ಗೆ 11.10ರ ವೇಳೆಗೆ ಈಗಿರುವ ತಾಮ್ರದ ಹೊದಿಕೆಯನ್ನು ಕಳಚುವ ಪ್ರಕ್ರಿಯೆಗೆ ಚಾಲನೆ ದೊರಕಲಿದೆ. ಆ ವೇಳೆ ಭಕ್ತರು ಭಾರೀ ಸಂಖ್ಯೆಯಲ್ಲಿ ಸೇರಲಿದ್ದು ಎಲ್ಲರೂ ದೇವರಿಗೆ "ಮುಷ್ಟಿ ಕಾಣಿಕೆ" ಸಮರ್ಪಿಸಲಿದ್ದಾರೆ ಎಂದು ಶ್ರೀಗಳು ಹೇಳೀದ್ದಾರೆ.ವಾಸ್ತುಶಿಲ್ಪಿ ಸುಬ್ರಹ್ಮಣ್ಯ ಅವಧಾನಿ ಈ ಎಲ್ಲಾ ಕೈಂಕರ್ಯದ ಮೇಲ್ವಿಚಾರಣೆ ನಡೆಸಲಿದ್ದಾರೆ. ಇನ್ನು ಸಾಮಾನ್ಯ ಭಕ್ತರಿಗೆ ಶ್ರೀಕೃಷ್ಣ ದರ್ಶನಕ್ಕೆ ಯಾವ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಶ್ರೀಗಳು ಭರವಸೆ ನಿಡಿದ್ದಾರೆ.
SCROLL FOR NEXT