ರಾಜ್ಯ

ನೀತಿ ಸಂಹಿತೆ ಉಲ್ಲಂಘನೆ; ವಿಜಯಾನಂದ ಕಾಶಪ್ಪನವರ ವಿರುದ್ಧ ಜಾಮೀನು ರಹಿತ ವಾರಂಟ್

Srinivas Rao BV
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ನಗರದ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ನ್ಯಾಯಾಲಯ ಜಾಮೀನು ರಹಿತ ವಾರಂಟ್‍ ಜಾರಿ ಮಾಡಿದೆ. 
ಬುಧವಾರ ಮುಂಜಾನೆ ಪ್ರಕರಣ ವಿಚಾರಣೆಗೆ ಬಂದಾಗ, ಕಾಶಪ್ಪನವರ ಪರ ವಕೀಲರು , ಅವರು ಶೌಚಾಲಯಕ್ಕೆ ಹೋಗಿದ್ದಾರೆ. ವಿಚಾರಣೆಯನ್ನು ಸ್ವಲ್ಪ ಕಾಲ ಮುಂದೂಡಿ ಎಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ ವಿಚಾರಣೆಯನ್ನು ಮಧ್ಯಾಹ್ನ 1.45ಕ್ಕೆ ಮುಂದೂಡಿದರು. ಪ್ರಕರಣ ಮರು ವಿಚಾರಣೆಗೆ ಬಂದಾಗ ಪ್ರಕರಣದ ಪರ, ವಿರೋಧಿ ವಕೀಲರು ಕೂಡ ಹಾಜರಿರದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮತ್ತೆ ಮಧ್ಯಾಹ್ನ 3ಕ್ಕೆ ಮುಂದೂಡಿದರು. 
ಮಧ್ಯಾಹ್ನ ಪ್ರಕರಣ ವಿಚಾರಣೆಗೆ ಬಂದಾಗ, ಕಾಶಪ್ಪನವರ ಸಂಬಂಧಿಕರು ಹಠಾತ್ ನಿಧನ ಹೊಂದಿದ್ದರಿಂದ ಅನಿವಾರ್ಯವಾಗಿ ಅವರು ಹೊರಡಬೇಕಾಯಿತು. ಆದ್ದರಿಂದ ಇಂದಿನ ವಿಚಾರಣೆಗೆ ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ವಕೀಲರು ಮನವಿ ಮಾಡಿದರು.
ಇದರಿಂದ ಆಕ್ರೋಶಗೊಂಡ ನ್ಯಾಯಾಧೀಶರು, ಪದೇ ಪದೇ ಇಂತಹ ನೆಪಗಳನ್ನು ಹೇಳಿ ನ್ಯಾಯಾಲಯದ ಜೊತೆಗೆ ಆಟವಾಡುತ್ತಿದ್ದೀರಾ? ಎಂದು ವಕೀಲರನ್ನು ತರಾಟೆಗೆ ತೆಗೆದುಕೊಂಡು ಕಾಶಪ್ಪನವರ ವಿರುದ್ಧ ಜಾಮೀನು ರಹಿತ ವಾರಂಟ್‍ ಜಾರಿ ಮಾಡಿದರು.
SCROLL FOR NEXT