ರಾಜ್ಯ

ಹಣ,ಉಡುಗೊರೆ ತಪಾಸಣೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಸಂಜೀವ್ ಕುಮಾರ್

Nagaraja AB

ಬೆಂಗಳೂರು: ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಕ್ರಮ ತಡೆಗಟ್ಟಲು ವ್ಯಾಪಕ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹಣ, ಉಡುಗೊರೆ ಪತ್ತೆಗಾಗಿ ತಪಾಸಣೆ ನಡೆಸುವ ವೇಳೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಪ್ರಯಾಣದ ವೇಳೆಯಲ್ಲಿ ದಾಖಲೆಗಳಿಲ್ಲದೆ 50 ಸಾವಿರ ರೂಪಾಯಿಗೂ  ಮೇಲ್ಪಟ್ಟು ಹಣ ಇಟ್ಟುಕೊಳ್ಳುವಂತಿಲ್ಲ.10 ಸಾವಿರ ರೂಪಾಯಿಗೂ ಹೆಚ್ಚಿನ ಮೌಲ್ಯದ  ಉಡುಗೊರೆಗಳನ್ನು ತೆಗೆದುಕೊಂಡು ಹೋಗಲು ಅಗತ್ಯ ದಾಖಲೆ ಒದಗಿಸಬೇಕು ಎಂದರು.

ನಗದು ಸಾಗಿಸುವಾಗ ಬ್ಯಾಂಕುಗಳು ನಗದು ಹಣವನ್ನು ಹೊರಗುತ್ತಿಗೆಯ ಏಜೆನ್ಸಿ ಅಥವಾ ಕಂಪೆನಿ ವಾಹನಗಳಲ್ಲಿ ಸಾಗಿಸಬಾರದು.ಹೊರಗುತ್ತಿಗೆಯ ಏಜೆನ್ಸಿಗಳು ಕಂಪೆನಿಗಳು ಬ್ಯಾಂಕಿನ ಎಟಿಎಂಗಳಿಗೆ ಹಣ ತುಂಬಿಸಲು ಮತ್ತು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ನಗದು ಸಾಗಿಸುವ ಸಂದರ್ಭದಲ್ಲಿ ಬ್ಯಾಂಕಿನಿಂದ ಅಧಿಕೃತ ಪತ್ರ ಅಥವಾ ದಾಖಲೆಗಳನ್ನು ಹೊಂದಿರಬೇಕು. ಹಣಸಾಗಿಸುವ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು ಎಂದು ಸ್ಪಷ್ಟಪಡಿಸಿದರು.
ಚೆಕ್ ಪೋಸ್ಟ್ ಗಳು ಮತ್ತಿತರ ಕಡೆಗಳಲ್ಲಿ ಜನ ಸಾಮಾನ್ಯರಿಗೆ ಸಣ್ಣಪುಟ್ಟ ಕಿರಿಕಿರಿ ಎದುರಾಗಬಹುದು.ಹಾಗೊಂದು ವೇಳೆ ಅನಗತ್ಯ ತೊಂದರೆ ಹಾಗೂ ನಿಯಮಬಾಹಿರವಾಗಿ ತಪಾಸಣೆ ಮಾಡಿರುವ ಬಗೆಗಿನ ದೂರುಗಳನ್ನು ಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ಮುಂದೆ ಬಾಧಿತರು ದೂರು ಸಲ್ಲಿಸಬಹುದು ಎಂದು ಸಂಜೀವ್ ಕುಮಾರ್ ಹೇಳಿದರು.
SCROLL FOR NEXT