ಬೆಂಗಳೂರು: ಸಂಗೀತರೊಬ್ಬರ ಮನೆಗೆ ನುಗ್ಗಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 12 ರಂದು ಈ ಘಟನೆ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ವಿವೇಕನಗರದಲ್ಲಿ ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ.
ನಿಖಿಲ್ ಬಿಎಸ್ (22) ಸ್ಟೆಪೇನ್ ರಾಜ್ (25) ವೇಣು ಯಾದವ್ (22) ಮತ್ತು ಪ್ರೇಮ್ (26) ಬಂಧಿತ ಆರೋಪಿಗಳು. ಇವರೆಲ್ಲಾ ಕಮನಹಳ್ಳಿ ಹಾಗೂ ಹೊರಮಾವಿನ ನಿವಾಸಿಗಳು.
ಸಂಗೀತಗಾರ ಮಧುಪನ್ ಎಂಬವರನ್ನು ಅಪಹರಿಸಿದ ಆರೋಪಿಗಳು , ಅವರ ಮನೆಗೆ ಎಳೆದುಕೊಂಡು ಹೋಗಿ ಲ್ಯಾಪ್ ಟಾಪ್, ಮೊಬೈಲ್ ಪೋನ್ ಮತ್ತು 10 ಸಾವಿರ ನಗದನ್ನು ದೋಚಿದ್ದಾರೆ.
ನಂತರ ಎಟಿಎಂ ಕಾರ್ಡ್ ಕಿತ್ತುಕೊಂಡು ಪಿನ್ ನಂಬರ್ ಗಾಗಿ ಒತ್ತಾಯಿಸಿದ್ದಾರೆ. ಇದಕ್ಕೆ ಆತ ನಿರಾಕರಿಸಿದಾಗ ಅವರನ್ನು ಕಾರಿನಲ್ಲಿ ಕುಳಿರಿಸಿಕೊಂಡು ದೂರ ಕರೆದುಕೊಂಡು ಹೋಗಿದ್ದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಿನ್ ನಂಬರ್ ಮರೆತಿರುವುದಾಗಿ ಮಧುಪನ್ ಹೇಳಿದ ನಂತರ ಕೆಆರ್ ಪುರಂ ಬಳಿಯ ಅವಲಹಳ್ಳಿ ಬಳಿ ಕಾರಿನಿಂದ ತಳ್ಳಿದ್ದಾರೆ
ಇದನ್ನು ನೋಡಿದ ದಾರಿಹೋಕರು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ನಂತರ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಮಧುಪನ್ ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳು ನಗರದಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಅವರಿಂದ ಐದು ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ