ಬೆಂಗಳೂರು: ವ್ಯಾಸಂಗ ಮಾಡಬೇಕೆಂಬ ಹಂಬಲವಿದ್ದ ಮನೆಕೆಲಸ ಮಾಡುವ ವಿದ್ಯಾರ್ಥಿಗೆ ಮಹಿಳೆಯೊಬ್ಬರು ನೆರವು ನೀಡಿ ಆಕೆಯ ಕನಸು ನನಸು ಮಾಡಿದ್ದಾರೆ.
ವ್ಯಾಸಂಗ ಮಾಡಬೇಕೆಂಬ ತನ್ನ ಆಸೆಯನ್ನು ಮುಚ್ಚಿಟ್ಟು ಜ್ಯೋತಿ ಮನೆ ಕೆಲಸ ಮಾಡಿಕೊಂಡಿದ್ದರು. ಬಿಟಿಎಂ ಲೇಔಟ್ ನಿವಾಸಿ ರೀತು ಸಿಂಗ್ ಅವರ ಸಹಾಯದಿಂದ ದ್ವಿತೀಯ ಪಿಯಸಿಯಲ್ಲಿ ಶೇ. 90 ರಷ್ಚು ಅಂಕ ಗಳಿಸಿ, ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಪ್ರಥಮ ಬಿ,ಕಾಂ ತರಗತಿಗೆ ಸೇರಿದ್ದಾರೆ.
2012 ರಲ್ಲಿ ಜ್ಯೋತಿ ತಮ್ಮ ಪಿಯುಸಿ ವಿದ್ಯಾಭ್ಯಾಸವನ್ನು ಕಾರಣಾಂತರಗಳಿಂದ ಅರ್ಧಕ್ಕೆ ನಿಲ್ಲಿಸಿದ್ದರು. ತನ್ನ ಸಹೋದರಿಯ ಮದುವೆಯ ವೆಚ್ಚಕ್ಕಾಗಿ ಮಾಡಿದ್ದ ಸಾಲ ತೀರಿಸಲು ಮನೆ ಕೆಲಸ ಸೇರಿದ್ದರು, ಓದಬೇಕೆಂಬ ಬಯಕೆಯನ್ನು ಮನೆ ಮಾಲೀಕರ ಬಳಿ ಜ್ಯೋತಿ ಬಿಚ್ಚಿಟ್ಟದ್ದಳು. ನಂತರ ಅವರು ನನಗೆ ಪಿಯುಸಿ ಕಾಲೇಜಿಗೆ ಸೇರಿಸಿದರು, ಅವರಿಂದ ನನ್ನ ಪಿಯುಸಿ ಪೂರ್ಣಗೊಂಡಿತು ಎಂದು ಜ್ಯೋತಿ ತಿಳಿಸಿದ್ದಾರೆ.
ಸದ್ಯ ಪದವಿ ಕಾಲೇಜಿಗೆ ಹೋಗಲು ಕಾಯುತ್ತಿರುವ ಜ್ಯೋತಿಗೆ ಬ್ಯಾಂಕರ್ ಆಗಬೇಕೆಂಬ ಆಸೆಯಿದೆ. ಜ್ಯೋತಿ ಅಗ್ರಹಾರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯಸಿ ವ್ಯಾಸಂಗ ಮಾಡಿದ್ದು, ಈಗ ಮೊದಲ ಬಾರಿಗೆ ಪದವಿಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಅಧ್ಯಯನ ನಡೆಸಬೇಕಿದೆ. ಇದೊಂದು ಸವಾಲಾಗಿ ಸ್ವೀಕರಿಸಿರುವುದಾಗಿ ಜ್ಯೋತಿ ಹೇಳಿದ್ದಾರೆ.