ಬೆಂಗಳೂರು: ಶ್ರೀಲಂಕಾದಲ್ಲಿ ಕೆಲ ದಿನಗಳ ಹಿಂದೆ ಈಸ್ಟರ್ ಸಂಡೆಯಂದು ಭೀಕರ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದವರು ಭಾರತದ ಕಾಶ್ಮೀರ, ಕೇರಳ, ಬೆಂಗಳೂರಿನಲ್ಲಿ ಕೆಲವು ತರಬೇತಿ ಪಡೆದಿದ್ದರು ಎಂದು ಶ್ರೀಲಂಕಾ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮಹೇಶ್ ಸೇನನಾಯಕೆ ಆತಂಕಕಾರಿ ಸುದ್ದಿಯನ್ನು ಬಹಿರಂಗಗೊಳಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಭಾರತೀಯ ತನಿಖಾ ಸಂಸ್ಥೆಗಳು ಆತ್ಮಹತ್ಯಾ ದಾಳಿಕೋರರಲ್ಲಿ ಇಬ್ಬರು 2012ರಲ್ಲಿ ಬ್ಯುಸಿನೆಸ್ ವೀಸಾದೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದು ನಿಜ. ಆದರೆ ಇಲ್ಲಿ ತರಬೇತಿ ಪಡೆದಿರುವುದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.
ತಮ್ಮ ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ನಿಷೇಧಿತ ಎಲ್ ಟಿಟಿಇ(ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಮ್)ಜೊತೆಗೆ ನಡೆಯುತ್ತಿರುವ ಸೇನಾಪಡೆಯ ಯುದ್ಧವನ್ನು ಉಲ್ಲೇಖಿಸಿದ ಲೆಫ್ಟಿನೆಂಟ್ ಜನರಲ್ ಸೇನನಾಯಕೆ, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಶಾಂತಿ ನೆಲೆಸಿದೆ ಎಂದಿದ್ದರು.
ಶ್ರೀಲಂಕಾದ ಚರ್ಚ್ ಮತ್ತು ಹೊಟೇಲ್ ಗಳ ಮೇಲೆ ನಡೆದ ಉಗ್ರರ ದಾಳಿ ಭಾರತ ಮತ್ತು ಶ್ರೀಲಂಕಾದ ದ್ವಿಪಕ್ಷೀಯ ಸಂಬಂಧದ ಸೂಕ್ಷ್ಮ ಅಂಶವಾಗಲಿದೆ.
ಕಳೆದ ತಿಂಗಳು 21ರಂದು ಶ್ರೀಲಂಕಾದ ಇಬ್ಬರು ಆತ್ಮಹತ್ಯಾ ದಾಳಿಕೋರರಾದ ಇಲ್ಹಮ್ ಅಹ್ಮದ್ ಮೊಹಮ್ಮದ್ ಇಬ್ರಾಹಿಂ ಮತ್ತು ಆತನ ಹಿರಿಯ ಸೋದರ ಇನ್ಷಾಫ್ ಅಹ್ಮದ್ ಅಲ್ಲಿನ ಖ್ಯಾತ ಶಾಂಗ್ರಿ-ಲಾ ಮತ್ತು ಸಿನ್ನಮೊನ್ ಗ್ರಾಂಡ್ ಹೊಟೇಲ್ ಮತ್ತು ಚರ್ಚ್ ಮೇಲೆ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 253 ಮಂದಿ ಮೃತಪಟ್ಟಿದ್ದು 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ದಾಳಿ ನಡೆಸಿದ ಸೋದರರು ಬ್ಯುಸಿನೆಸ್ ವೀಸಾದಡಿ ಬೆಂಗಳೂರು, ಕೊಚ್ಚಿ, ಚೆನ್ನೈ, ಮುಂಬೈ ಮತ್ತು ದೆಹಲಿಗೆ ಪ್ರಯಾಣಿಸಿದ್ದು ಪಾಸ್ ಪೋರ್ಟ್ ಹೊಂದಿದ್ದರು ಎಂದು ಭಾರತೀಯ ತನಿಖಾ ಸಂಸ್ಥೆಗಳು ಖಚಿತಪಡಿಸಿವೆ.
ಈ ಆತ್ಮಹತ್ಯಾ ದಾಳಿಕೋರರ ತಂದೆ ಮೊಹಮ್ಮದ್ ಇಬ್ರಾಹಿಂ ಕೊಲಂಬೊದ ಇಶಾನ್ ಎಕ್ಸೊರ್ಟ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯನ್ನು ನಡೆಸುತ್ತಿದ್ದು ದೊಡ್ಡ ಮಸಾಲೆ ಪದಾರ್ಥ ಉದ್ಯಮಿಯಾಗಿದ್ದಾರೆ. ಇಶಾನ್ ಮತ್ತು ಇಲ್ಹಾನ್ ಸೋದರರಿಗೆ ಸಹ ಉದ್ಯಮವನ್ನು ಹೊರ ದೇಶಗಳಲ್ಲಿ ವಿಸ್ತರಿಸುವ ಬಯಕೆಯಿತ್ತು. ಕೇರಳ ಮತ್ತು ದೆಹಲಿಯಲ್ಲಿ ತಮ್ಮ ಉದ್ಯಮವನ್ನು ಆರಂಭಿಸುವ ಯೋಜನೆಯಲ್ಲಿ ಏಳು ವರ್ಷಗಳ ಹಿಂದೆ ಭಾರತದ ವಿವಿಧ ನಗರಗಳಿಗೆ ಭೇಟಿ ಕೊಟ್ಟಿದ್ದರು. ಆದರೆ ಅವರು ಕಾಶ್ಮೀರಕ್ಕೆ ಹೋಗಿ ಯಾವುದೇ ಉಗ್ರಗಾಮಿ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿರಲಿಲ್ಲ ಎಂದು ಉನ್ನತ ತನಿಖಾ ಮೂಲಗಳು ತಿಳಿಸಿವೆ.