ಹುಬ್ಬಳ್ಳಿ: ಐಟಿ ದಾಳಿ ನಡೆದಾಗಲೇ ನಾನು ಹೆದರಲಿಲ್ಲ ಇನ್ನು ಕಣ್ಣೀರು ಹಾಕಿ ಓಟು ಕೇಳುತ್ತೇನಾ? ಆದರ ಅಗತ್ಯ ನನಗಿಲ್ಲ. ಶಿವಳ್ಳಿ ನನ್ನ ಆಪ್ತ ಸ್ನೇಹಿತ ನಮ್ಮನ್ನು ಅಗಲಿದ ನೋವಿನಲ್ಲಿ ಅವರನ್ನು ನೆನೆದು ನಾನು ಭಾವುಕನಾದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಶುಕ್ರವಾರ ಹುಬ್ಬಳ್ಳಿಯ ಕಾಟನ್ ಕೌಂಟಿ ಕ್ಲಬ್ ನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತಕ್ಕಾಗಿ ಕಣ್ಣೀರು ಹಾಕಿಲ್ಲ. ಶಿವಳ್ಳಿ ನನ್ನ ಆತ್ಮೀಯ ಸ್ನೇಹಿತ. ಹೀಗಾಗಿ ಅತನನ್ನು ನೆನೆದು ಭಾವುಕನಾದೆ. ನನ್ನ ಮನೆ ಮೇಲೆ ಆದಾಯ ತೆರಿಗೆ ದಾಲಿ ಆದಾಗಲೆ ಹೆದರಲಿಲ್ಲ. ಇನ್ನು ಕಣ್ಣಿರು ಹಾಕಿ ಮತ ಕೇಳುವ ಅಗತ್ಯವಿಲ್ಲ ಎಂದರು.
ನಾನು ಈ ಹಿಂದೆಯೂ ಶಿವಳ್ಳಿ ಪರ ಕೆಲಸ ಮಾಡಿದ್ದೆ. ಈಗ ಅವರ ಕುಟುಂಬದವರ ಪರ ಕೆಲಸ ಮಾಡುತ್ತಿದ್ದೇನೆ. ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಉತ್ಸಾಹದಿಂದ ಚುನಾವಣೆ ನಡೆಸಲು ಬಂದಿದ್ದಾರೆ. ಇದರಿಂದ ತುಂಬಾ ಸಂತೋಷವಾಗಿದೆ. ಕ್ಷೇತ್ರದಲ್ಲಿ ನಮ್ಮ ಗ್ರೌಂಡ್ ರಿಪೋರ್ಟ್ ಚೆನ್ನಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಒಗ್ಗಟ್ಟಿನಿಂದ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದು ಇಲ್ಲಿನ ಅಭಿವೃದ್ಧಿಗೆ ಬದ್ದರಾಗಿದ್ದೇವೆ. ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು ಸಕ್ರಿಯವಾಗಿ ನಮ್ಮ ಪರ ಕೆಲಸ ಮಾಡುತ್ತಿದ್ದಾರೆ ಎಂದರು.
ಶಿವಳ್ಳಿ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ನಾವು ಮುಂದುವರಿಸುತ್ತೇವೆ. ಈ ಚುನಾವಣೆ ಸಂದರ್ಭದಲ್ಲಿ ನಾವು ಯಾರನ್ನೂ ಟೀಕೆ ಮಾಡುವುದು ಸರಿಯಲ್ಲ. ಟೀಕೆ ಮಾಡಲು ಇದು ಸಮಯ ಕೂಡ ಅಲ್ಲ. ಈ ಚುನಾವಣೆಯಲ್ಲಿ ಎಲ್ಲಾ ಪಕ್ಷದ ಮತದಾರರು ಶಿವಳ್ಳಿ ಅವರ ಕುಟುಂಬ ಹಾಗೂ ಕಾಂಗ್ರೆಸ್ ಗೆ ಮತ ಹಾಕುತ್ತಾರೆ. ಇಡೀ ಸರ್ಕಾರ ಕುಂದಗೋಳ ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದೆ. ಕ್ಷೇತ್ರದ ಯಾವುದೇ ಪ್ರದೇಶದಲ್ಲೂ ಹಣದ ಆಮಿಷ ಹಾಗೂ ಅಧಿಕಾರದ ಆಮಿಷ ಒಡ್ಡುತ್ತಿಲ್ಲಾ. ಬಿಜೆಪಿಯವರ ಬಳಿ ಸಾಕ್ಷಿ ಇದ್ದರೆ ಬಹಿರಂಗ ಪಡಿಸಲಿ ಎಂದು ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರಿಗೆ ಸವಾಲು ಹಾಕಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನ 20 ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ ಶಿವಕುಮಾರ್, ಯಡಿಯೂರಪ್ಪ ಅವರ ಜತೆ ರಾಜ್ಯದ 222 ಶಾಸಕರು ಇದ್ದಾರೆ. ಅದೇ 222 ಜನ ಶಾಸಕರು ನಮ್ಮ ಸಂಪರ್ಕದಲ್ಲಿಯೂ ಇದ್ದಾರೆ. ಮೈತ್ರಿ ಸರ್ಕಾರ ಬೀಳಿಸಿ ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕಾಣುತ್ತಿರುವ ಅವರು ಮೂಹೂರ್ತ ನಿಗದಿ ಮಾಡಿಕೊಳ್ಳಲಿ' ಎಂದು ಲೇವಡಿ ಮಾಡಿದರು.