ರಾಯಚೂರು: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ರಾಯಚೂರು ಮೂಲದ ವಿದ್ಯಾರ್ಥಿನಿ ಮಧು ಪತ್ತಾರ್ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ನಾಪತ್ತೆಯಾದ ದಿನ ವಿದ್ಯಾರ್ಥಿ ಮಧು ಪತ್ತಾರ್ ಮೇಲೆ ಹಲವು ಬಾರಿ ಹಲ್ಲೆಯಾಗಿದೆ ಎನ್ನಲಾಗಿದೆ.
ಮಧು ಪತ್ತಾರ್ ಸಾವಿಗೆ ಸಂಬಂಧಿಸಿದಂತೆ ಸಿಐಡಿ ನಡೆಸುತ್ತಿರುವ ತನಿಖೆ ಸಂಬಂಧ ಕೆಲ ಮಹತ್ವದ ದಾಖಲೆಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದ್ದು, ದಾಖಲೆಗಳಲ್ಲಿರುವಂತೆ ನಾಪತ್ತೆಯಾದ ದಿನ ಮಧು ಪತ್ತಾರ್ ಮೇಲೆ ಆರೋಪಿ ಸುದರ್ಶನ್ ಯಾದವ್ ಹಲವು ಬಾರಿ ಹಲ್ಲೆ ನಡೆಸಿದ್ದ ಎಂದು ಹೇಳಲಾಗಿದೆ. ಅಂತೆಯೇ ಸಾವನ್ನಪ್ಪಿದ ವಿದ್ಯಾರ್ಥಿ ಮಧು ಪತ್ತಾರ್ ಳ ದ್ವಿಚಕ್ರ ವಾಹನದ ಕೀ ಕೂಡ ಆತನ ಬಳಿ ಇತ್ತು. ಅದನ್ನು ಪೊಲೀಸರು ತನಿಖಾ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ತಮ್ಮ ಪಂಚನಾಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಆದರೆ ಈ ವರದಿಯಲ್ಲಿನ ಅಂಶಗಳು ಈ ವರೆಗೂ ಬಹಿರಂಗವಾಗಿರಲಿಲ್ಲ. ಕಳೆದ ಏಪ್ರಿಲ್ 2ರಂದು ಮಧು ಪತ್ತಾರ್ ಮೃತ ದೇಹ ಪತ್ತೆಯಾದ ಸ್ಥಳ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ವರದಿಯಲ್ಲಿರುವಂತೆ ಮಧು ಪತ್ತಾರ್ ಏಪ್ರಿಲ್ 13ರಂದು ನಾಪತ್ತೆಯಾಗಿದ್ದರು. ಅಂದು ಮನೆಯಿಂದ ಹೊರಟಿದ್ದ ಮಧು ಅವರನ್ನು ಆರೋಪಿ ಸುದರ್ಶನ್ ಯಾದವ್ ಹಿಂಬಾಲಿಸಿಕೊಂಡು ಹೋಗಿದ್ದ ಎನ್ನಲಾಗಿದೆ. ಐಡಿಎಸ್ ಎಂಟಿ ಲೇಔಟ್ ನಲ್ಲಿರುವ ಮನೆಯಿಂದ ಕಾಲೇಜಿನ ವರೆಗೂ ಆತ ಮಧುಳನ್ನು ತನ್ನ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದ. ನವೋದಯ ಆಸ್ಪತ್ರೆ ಎದುರಿನಲ್ಲಿರುವ ವೈಷ್ಣವಿ ಹೆವೆನ್ ಅಪಾರ್ಟ್ ಮೆಂಟ್ ಬಳಿ ಆಕೆಯನ್ನು ಎದುರುಗೊಂಡು ಮಾತನಾಡಿದ್ದ. ಈ ವೇಳೆ ಇಬ್ಬರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಈ ವೇಳೆ ಆರೋಪಿ ಸುದರ್ಶನ್ ಮಧು ಪತ್ತಾರ್ ಕೆನ್ನೆಗೆ ಭಾರಿಸಿದ್ದ. ಈ ಘಟನೆ ಬಳಿಕ ಮಧು ಅಲ್ಲಿಂದ ಹೊರಟು ಹೋಗಿದ್ದಳು. ಆಗಲೂ ಕೂಡ ಮಧು ಮತ್ತೆ ಆಕೆಯನ್ನು ಹಿಂಬಾಲಿಸಿದ್ದ.
ಇದಕ್ಕೂ ಮೊದಲು ಮಧು ಪತ್ತಾರ್ ಮದುವೆಗಾಗಿ ಆಕೆಯ ಪೋಷಕರು ಸಿದ್ಧ ಪಡಿಸಿದ್ದ ಜಾತಕದ ಪ್ರತಿಯನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಆಕೆಯನ್ನು ಅಡ್ಡಗಟ್ಟಿದ್ದ ಸುದರ್ಶನ್ ಯಾದವ್, ಜಾತಕದ ಪ್ರತಿಯನ್ನು ಕಸಿದುಕೊಂಡಿದ್ದ. ಈ ಬಗ್ಗೆ ಮಧು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವೇಳೆ ಪೊಲೀಸರು ಆತನ ಡೈರಿ ಮತ್ತು 13 ಪುಟಗಳ ಮಧು ಜಾತಕವನ್ನು ವಶ ಪಡಿಸಿಕೊಂಡಿದ್ದರು.
ಇನ್ನು ತನಿಖಾ ವರದಿಯಲ್ಲಿರುವಂತೆ ಏಪ್ರಿಲ್ 10ರಂದು ಮಂತ್ರಾಲಯದ ಲಾಡ್ಜ್ ವೊಂದರಲ್ಲಿ ಆರೋಪಿ ಸುದರ್ಶನ್ ಯಾದವ್ ಮತ್ತು ಮಧು ಪತ್ತಾರ್ ಕಾಣಿಸಿಕೊಂಡ ಕುರಿತು ಸಿಸಿಟಿವಿ ದೃಶ್ಯಾವಳಿಯಿಂದು ತಿಳಿದುಬಂದಿದೆ ಎನ್ನಲಾಗಿದೆ. ಲಾಡ್ಜ್ ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ವಿಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಂದು ಬೆಳಗ್ಗೆ 10.17ಕ್ಕೆ ಲಾಡ್ಜ್ ಗೆ ಬಂದಿದ್ದ ಸುದರ್ಶನ್ ಬಳಿಕ 10.21ಕ್ಕೆ ಲಾಡ್ಜ್ ನಿಂದ ಹೊರಬಂದಿದ್ದ, ಬಳಿಕ ಮತ್ತೆ ಬೆಳಗ್ಗೆ 10:49ಕ್ಕೆ ಮಧು ಪತ್ತಾರ್ ನೊಂದಿಗೆ ಲಾಡ್ಜ್ ಗೆ ಬಂದಿದ್ದ. 2 ನಿಮಿಷಗಳ ಬಳಿಕ ಲಾಡ್ಜ್ ನಿಂದ ಹೊರಗೆ ಬಂದ ಸುದರ್ಶನ್ ನೀರಿನ ಬಾಟಲ್ ಮತ್ತು ತಂಪುಪಾನೀಯಗಳನ್ನು ತೆಗೆದುಕೊಂಡು ಲಾಡ್ಜ್ ಗೆ ವಾಪಸ್ ಆಗಿದ್ದ. ಬಳಿಕ ಮಧ್ಯಾಹ್ನ 3.10ರ ಸುಮಾರಿನಲ್ಲಿ ಈ ಜೋಡಿ ಲಾಡ್ಜ್ ನಿಂದ ಹೊರ ಹೋಗಿತ್ತು ಎಂದು ತಿಳಿದುಬಂದಿದೆ.
ಏಪ್ರಿಲ್ 13ರಂದು ಮತ್ತೆ ಮಧು ಮೇಲೆ ಹಲ್ಲೆ
ಸಿಐಡಿ ವರದಿಯಲ್ಲಿರುವಂತೆ ಏಪ್ರಿಲ್ 13ರಂದು ಮತ್ತೆ ಸುದರ್ಶನ್ ಮಧು ಮೇಲೆ ಹಲ್ಲೆ ಮಾಡಿದ್ದ. ಬೈಕ್ ಪಾರ್ಕಿಂಗ್ ನಲ್ಲಿ ಮಧು ಬೈಕ್ ನಿಲ್ಲಿಸಿದ್ದ ವೇಳೆ ಆಕೆ ಬಳಿ ಬಂದ ಸುದರ್ಶನ್ ಆಕೆಯೊಂದಿಗೆ ಜಗಳಕ್ಕೆ ಇಳಿದಿದ್ದ. ಈ ವೇಳೆ ಯಿಂದ ಬೈಕ್ ಕೀ ಮತ್ತು ಮೊಬೈಲ್ ಫೋನ್ ಕಸಿದುಕೊಂಡಿದ್ದ ಸುದರ್ಶನ್ ಆಕೆಯ ಕೆನ್ನೆಗೆ ಭಾರಿಸಿದ್ದ. ಮಧು ಸಾವಿನ ಬಳಿಕ ಅಧಿಕಾರಿಗಳು ನಡೆಸಿದ್ದ ತನಿಖೆ ವೇಳೆ ಸುದರ್ಶನ್ ಮನೆಯಲ್ಲಿ ಮಧು ಬೈಕ್ ನ ಕೀ ಮತ್ತು ಆಕೆಯ ಮೊಬೈಲ್ ಪತ್ತೆಯಾಗಿತ್ತು ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos